ಮಹಿಳಾ ಸಬಲೀಕರಣಕ್ಕೆ ಶಕ್ತಿ ತುಂಬಿದ ಮೋದಿ: ಸುಲೋಚನಾ ಭಟ್
ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ ಐದು ವರ್ಷದಲ್ಲಿ ಮಹಿಳಾ ಪರವಾದ ಅನೇಕ ಯೋಜನೆಗಳನ್ನು ರೂಪಿಸಿದ್ದು, ಪ್ರಧಾನಿ ಮೋದಿ ಮಹಿಳಾ ಸಬಲೀಕರಣಕ್ಕೆ ಶಕ್ತಿ ತುಂಬಿದ್ದಾರೆ. ಮೋದಿ ಜಾರಿಗೆ ತಂದ ಮಹಿಳಾ ಪರ ಯೋಜನೆಗಳಿಂದ ದೇಶದ ಮಹಿಳೆಯರಲ್ಲಿ ಸುರಕ್ಷತಾ ಭಾವನೆ ಮೂಡಿದೆ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ. ಭಟ್ ವಿನಂತಿಸಿದರು.
ನಗರದ ಬಂಟ್ಸ್ ಹಾಸ್ಟೆಲ್ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೊದಲ ಬಾರಿಗೆ ರಕ್ಷಣೆಯಂತಹ ಮಹತ್ವದ ಖಾತೆಯನ್ನು ಮಹಿಳೆಯೊಬ್ಬರಿಗೆ ವಹಿಸಲಾಗಿದೆ. ವಿದೇಶಾಂಗ ಖಾತೆಯನ್ನು ಮಹಿಳೆ ಸಮರ್ಥವಾಗಿ ನಿಭಾಯಿಸಿದ್ದಾರೆ. ರಕ್ಷಣಾ ಸಚಿವೆಯನ್ನಾಗಿ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಅವರನ್ನು ನೇಮಿಸುವ ಮೂಲಕ ಪ್ರಧಾನಿ ಮೋದಿ ಮಹಿಳೆಯರ ಸಾಮರ್ಥ್ಯಕ್ಕೆ ಮಹತ್ವ ನೀಡಿದ್ದಾರೆ ಎಂದರು.
ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹೆಣ್ಣುಮಗಿವಿನ ಹೆಸರಿನಲ್ಲಿ 1.26ಕೋಟಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಈಗಾಗಲೇ 20 ಸಾವಿರ ಕೋಟಿ ರೂ. ಡೆಪಾಸಿಟ್ ಆಗಿದೆ ಎಂದು ಅವರು ವಿವರಿಸಿದರು.
ಮಹಿಳಾ ಸಾಂತ್ವನ ಸಖಿ ಯೋಜನೆ ದೇಶಾದ್ಯಂತ ಜಾರಿಗೊಂಡಿದೆ. ದೇಶದ ಮೊದಲ ಸಖಿ ಕೇಂದ್ರ ಉಡುಪಿಯಲ್ಲಿ ಆರಂಭಗೊಂಡಿದೆ. ಸ್ಟೆಪ್ ಯೋಜನೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ. ದೇಶದ 9 ದೊಡ್ಡ ನಗರದಲ್ಲಿ ನಿರ್ಭಯಾ ನಿಧಿ ಸ್ಥಾಪಿಸಲಾಗಿದೆ. ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಕಾನೂನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ವೇತನವನ್ನು ಶೇ. 50ರಷ್ಟು ಹೆಚ್ಚಿಸುವ ಜತೆಗೆ ಅವರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಮತ್ತು ಸುರಕ್ಷಾ ಭೀಮಾ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಉಜ್ವಲಾ ಯೋಜನೆಯಲ್ಲಿ 6.8 ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡಲಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಯತ್ನದಿಂದ ಜಿಲ್ಲೆಯಲ್ಲಿ 43,878 ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ದೊರೆತಿದೆ. ಮುದ್ರಾ ಯೋಜನೆಯಲ್ಲಿ ಜಿಲ್ಲೆಯಲ್ಲಿ 90 ಸಾವಿರಕ್ಕೂ ಅಧಿಕ ಮಂದಿಗೆ ಸಾಲ ಸೌಲಭ್ಯ ದೊರೆತಿದೆ. ಜನಧನ್ ಯೋಜನೆ, ಶೌಚಗೃಹ ನಿರ್ಮಾಣದಿಂದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ದೊರೆತಿದೆ ಎಂದರು.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ 6,000 ರೂ. ಉತ್ತೇಜಕ ಧನ ನೀಡಲಾಗಿದೆ. ಇಂದ್ರಧನುಷ್ ಮಿಶನ್ ಅಡಿಯಲ್ಲಿ 80 ಲಕ್ಷ ಗರ್ಭಿಣಿಯರಿಗೆ ರೋಗ ನಿರೋಧಕ ನೀಡಲಾಗಿದೆ. ಉದ್ಯೋಗದಲ್ಲಿರುವ ತಾಯಂದಿರಿಗೆ ತಾಯ್ತನದ ರಜೆಯನ್ನು 2 ವಾರದಿಂದ 26 ವಾರಕ್ಕೆ ಏರಿಸಲಾಗಿದೆ ಎಂದು ಸುಲೋಚನಾ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಪಂ ಅಧ್ಯಕ್ಷೆ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.
‘ಮುಸ್ಲಿಂ ಮಹಿಳೆಯರ ಒಲವು ಬಿಜೆಪಿಯತ್ತ’
ಬಹಳ ವರ್ಷಗಳಿಂದ ಮುಸ್ಲಿಂ ಸಮುದಾಯದಲ್ಲಿದ್ದ ಅನಿಷ್ಟ ಪದ್ಧತಿ ತ್ರಿವಳಿ ತಲಾಕ್ ನಿಷೇಧ, ಸ್ವಂತ ಹಣದಲ್ಲೇ ಹಜ್ ಯಾತ್ರೆ ಮಾಡಬೇಕೆಂಬ ಮುಸ್ಲಿಮರ ಇಚ್ಚೆಯನ್ನು ಪುರಸ್ಕರಿಸಿ, ಈ ಅನುದಾನವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಕ್ರಮ ಅನನ್ಯ. 45 ವರ್ಷದ ಮುಸ್ಲಿಂ ಮಹಿಳೆಯರು ಪುರುಷರ ಸಹಾಯವಿಲ್ಲದೆ ಸ್ವತಂತ್ರವಾಗಿ ಹಜ್ ಯಾತ್ರೆಗೆ ಅವಕಾಶ ನೀಡಿರುವುದು ಸಾಮಾಜಿಕ ಸಬಲೀಕರಣಕ್ಕೆ ಮೋದಿ ನೀಡಿರುವ ಉತ್ತೇಜನ. ಇದರಿಂದ ಮುಸ್ಲಿಂ ಮಹಿಳೆಯರೂ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದು ಸುಲೋಚನಾ ಭಟ್ ಹೇಳಿದರು.