ಸುರಕ್ಷಿತ ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಸಾಧ್ಯ: ರಾಜೀವ್ ಚಂದ್ರಶೇಖರ್
ರಾಷ್ಟ್ರೀಯ ಭದ್ರತೆ ಕುರಿತ ಉಪನ್ಯಾಸದಲ್ಲಿ ರಾಜೀವ್ ಚಂದ್ರಶೇಖರ್
ಉಡುಪಿ, ಎ.14: ದೇಶ ಸುರಕ್ಷಿತವಾಗಿದ್ದರೆ ಮಾತ್ರ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮೋದಿ ಸರಕಾರ ಕಳೆದ 5 ವರ್ಷಗಳಲ್ಲಿ ದೇಶದ ಸೈನ್ಯವನ್ನು ಬಲಪಡಿಸುವ ಕಾರ್ಯ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲ ಖಾಸಗಿ ಹೋಟೆಲ್ನಲ್ಲಿ ರವಿವಾರ ಆಯೋಜಿಸಲಾದ ರಾಷ್ಟ್ರೀಯ ಭದ್ರತೆ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡುತಿದ್ದರು.
ಯುಪಿಎ ಸರಕಾರ ನಾಯಕರ ಸಂಚಾರಕ್ಕೆ ಹೆಲಿಕಾಪ್ಟರ್ಗಳನ್ನು ಖರೀದಿಸಲು ಆಸಕಿತಿ ವಹಿಸಿತ್ತು. ಆದರೆ ವಾಯುಸೇನೆ ಬಳಸುತ್ತಿರುವ ದಶಕಗಳ ಹಿಂದಿನ ಮಿಗ್-21 ವಿಮಾನಕ್ಕೆ ಬದಲಾಗಿ ಆತ್ಯಾಧುನಿಕ ಯುದ್ಧ ವಿಮಾನ ಖರೀದಿಸಲು ಯಾವುದೇ ಆಸಕ್ತಿ ತೋರಿಸಿರಲಿಲ್ಲ ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಐಟಿ ದಾಳಿ ನಡೆದ ಸಂದರ್ಭದಲ್ಲಿ ಗೌಪ್ಯತಾ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈ ಮೂಲಕ ಅಧಿಕಾರಿಗಳ ಕರ್ತವ್ಯಕ್ಕೆ ಬೆದರಿಕೆ ಒಡ್ಡಿರುವ ಇವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ವಿಶಿಷ್ಟ ಸೇವಾ ಪದಕ ಪುರಸ್ಕೃತ ಮೇಜರ್ ಸುರೇಂದ್ರ ಪೂನಿಯಾ ಮಾತನಾಡಿ, ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ. ಈ ಬಾರಿಯ ಚುನಾವಣೆ ರಾಷ್ಟ್ರ ಮೊದಲೋ ಅಥವಾ ಕುಟುಂಬ ಮೊದಲೋ ಎಂಬುದನ್ನು ನಿರ್ಧರಿಸಲಿದೆ. ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಲು ಜೆಎನ್ಯು ನಂತಹ ಸಂಸ್ಥೆಗಳು ಲ್ಯಾಬೊರೇಟರಿ ರೀತಿಯಲ್ಲಿ ಕಾಯನಿರ್ರ್ವಹಿಸುತ್ತವೆ ಎಂದು ದೂರಿದರು.