ಉದ್ದಬೆಟ್ಟುನಲ್ಲಿ ಕೊಲೆಯತ್ನ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಎ.14: ಮಲ್ಲೂರಿನ ಉದ್ದಬೆಟ್ಟು ಸಮೀಪ ನಾಲ್ಕು ದಿನಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣದ ಆರೋಪಿಯೊಬ್ಬನನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಮಲ್ಲೂರು ಉದ್ದಬೆಟ್ಟು ನಿವಾಸಿ ನಿಝಾಮ್ (23) ಬಂಧಿತ ಆರೋಪಿ. ಈ ಪ್ರಕರಣದ ಇನ್ನೊಬ್ಬ ಆರೋಪಿ ಉಳಾಯಿಬೆಟ್ಟು ಅನ್ಸರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ನಟೋರಿಯಸ್: ನಾಲ್ಕು ದಿನಗಳ ಹಿಂದೆ ಉದ್ದಬೆಟ್ಟು ಸಮೀಪ ನಡೆದ ಕೊಲೆಯತ್ನ ಪ್ರಕರಣದ ಆರೋಪಿಗಳಾದ ನಿಝಾಮ್ ಮತ್ತು ಅನ್ಸರ್ ಪೊಲೀಸರಿಂದ ತಲೆಮರೆಸಿಕೊಂಡಿದ್ದರು. ನಿಝಾಮ್ ಮೇಲೆ ಉಳ್ಳಾಲ, ಬಜ್ಪೆ, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ, ದನಕಳವು ಸೇರಿದಂತೆ ನಾನಾ ಪ್ರಕರಣಗಳಿವೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈತನ ಮೇಲೆ ವಾರಂಟ್ ಹೊರಡಿಸಲಾಗಿತ್ತು. ಕೊಲೆಯತ್ನ ಆರೋಪಿ ಅನ್ಸರ್ಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಕಮಿಷನರ್ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಮಂಗಳೂರು ದಕ್ಷಿಣ ಎಸಿಪಿ ರಾಮರಾವ್ ಮಾರ್ಗದರ್ಶನಂತೆ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಭಜಂತ್ರಿ ಮತ್ತು ತಂಡ ಭಾಗವಹಿಸಿತ್ತು.