ದ್ವಿತೀಯ ಪಿಯು: ವಾಣಿಜ್ಯ ವಿಭಾಗದಲ್ಲಿ ದ.ಕ. ಜಿಲ್ಲೆಯ ಇಬ್ಬರು ರಾಜ್ಯಕ್ಕೆ ಪ್ರಥಮ
ಮಂಗಳೂರು, ಎ.15: ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಏಕ ಪ್ರಕಾರದಲ್ಲಿ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಪಪೂ ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಅನ್ಸಿಲ್ಲಾ ಡಿಸೋಜ ಹಾಗೂ ವಿಟ್ಲ- ಅಳಿಕೆ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮಾ ಕೆ. ತಲಾ 596(99.33 ಶೇ.)ಅಂಕಗಳನ್ನು ಗಳಿಸಿದ್ದಾರೆ.
ಒಲ್ವಿಟಾ ಅವರು ಬಿಸಿನೆಸ್ ಸ್ಟಡೀಸ್, ಅಕೌಂಟ್ಸ್, ಬೇಸಿಕ್ ಮ್ಯಾಥ್ಸ್ ಹಾಗೂ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ತಲಾ 100 ಅಂಕಗಳನ್ನು ಇಂಗ್ಲಿಷ್ ಹಾಗೂ ಹಿಂದಿ ವಿಷಯಗಳಲ್ಲಿ ತಲಾ 98 ಅಂಕಗಳನ್ನು ಗಳಿಸಿದ್ದಾರೆ. ಇವರು ಕಿನ್ನಿಗೋಳಿಯ ಒಲ್ವಿರಾ ಉಬಾಲ್ಡ್ ಡಿಸೋಜ ಹಾಗೂ ಅನಿತಾ ಮರಿಯ ಡಿಸೋಜ ದಂಪತಿಯ ಪುತ್ರಿ.
ಶ್ರೀಕೃಷ್ಣ ಶರ್ಮಾ ಇಂಗ್ಲಿಷ್ ನಲ್ಲಿ 96, ಸಂಸ್ಕೃತ 100, ಬಿಸಿನೆಸ್ ಸ್ಟಡೀಸ್ 100, ಅಂಕಿಅಂಶ ಶಾಸ್ತ್ರ 100, ಲೆಕ್ಕಶಾಸ್ತ್ರ 100 ಮತ್ತು ಮೂಲ ಗಣಿತದ ಅಧ್ಯಯನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಇವರು ಬದಿಯಡ್ಕದ ಪೆರ್ಡಾಲ ನಿವಾಸಿಯಾಗಿರುವ ಕೃಷಿಕ ಸುಬ್ರಹ್ಮಣ್ಯ ಭಟ್ ಹಾಗೂ ಶಾರದಾ ದಂಪತಿಯ ಪುತ್ರ.
ಮಂಗಳೂರಿನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀಯಾ ಶೆಣೈ 595(99.16 ಶೇ.) ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪುತ್ತೂರಿನ ಸೈಂಟ್ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿ ಸ್ವಸ್ತಿಕ್ ಪಿ. ಸಹಿತ ಏಳು ಮಂದಿ 594(99 ಶೇ.) ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನಿಗಳಾಗಿದ್ದಾರೆ.