ಮಂಗಳೂರು ಉತ್ತರ ಕ್ಷೇತ್ರಕ್ಕೆ ನಳಿನ್ ಕೊಡುಗೆ ಶೂನ್ಯ: ಮೊಯ್ದಿನ್ ಬಾವ
ಮಂಗಳೂರು, ಎ.15: ದ.ಕ. ಲೋಕಸಭಾ ಕ್ಷೇತ್ರದ ಸಂಸದರಾಗಿ ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ನಳಿನ್ ಕುಮಾರ್ ಕಟೀಲ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ನಯಾಪೈಸೆ ಕೊಡುಗೆ ನೀಡಿಲ್ಲ ಎಂದು ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಸದಸ್ಯರ ನಿಧಿಯಿಂದ ತಲಾ ಐದು ಕೋಟಿಯಂತೆ 10 ವರ್ಷಗಳಲ್ಲಿ 50 ಕೋಟಿ ರೂ. ಅನುದಾನ ಬಂದಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಸುರತ್ಕಲ್ ಮತ್ತು ಗುರುಪುರ ಬ್ಲಾಕ್ಗಳಿಗೆ ನೀಡಿರುವ ಅನುದಾನದ ಬಗ್ಗೆ ಬಹಿರಂಗ ಹೇಳಿಕೆ ನೀಡಲು ಸವಾಲು ಹಾಕಿದರು.
ಉತ್ತರ ಕ್ಷೇತ್ರದಲ್ಲಿ ನಾವು ಪ್ರಚಾರಕ್ಕೆ ಮುಂದಾದಾಗ ಸಂಸತ್ ಸದಸ್ಯರು ಯಾರು ಎನ್ನುವುದು ಅಲ್ಲಿನ ಸ್ಥಳೀಯರಿಗೇ ಮಾಹಿತಿ ಇಲ್ಲ. ಆ ಭಾಗದಲ್ಲಿ ಈಗಿನ ಶಾಸಕ ಭರತ್ ಶೆಟ್ಟಿ ಸೇರಿದಂತೆ ಬಿಜೆಪಿ ಜನಪ್ರತಿನಿಧಿಗಳ ಸಾಧನೆ, ಕೊಡುಗೆ, ಅಭಿವೃದ್ಧಿ ಏನು ಎನ್ನುವುದನ್ನು ಕ್ಷೇತ್ರದ ಜನರಿಗೆ ತಿಳಿಯಪಡಿಸಬೇಕು ಎಂದು ಆಗ್ರಹಿಸಿದರು.
ನಾನು ಶಾಸಕನಾಗಿದ್ದಾಗ ಐದು ವರ್ಷಗಳಲ್ಲಿ 23 ಬಿಲ್ಲವ ಮಂದಿರಗಳು ಹಾಗೂ 29 ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಪಿಡಬ್ಲುಡಿ ವ್ಯಾಪ್ತಿ 180 ಕೋಟಿ ರೂ. ಅನುದಾನ ಒದಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉಳಾಯಿಬೆಟ್ಟುವಿನಿಂದ ಮಲ್ಲೂರು, ಐದು ಕೋಟಿ ವೆಚ್ಚದ ವಾಮಂಜೂರು ಮುಖ್ಯ ರಸ್ತೆ, ಕೈಕಂಬದಿಂದ ವಿಮಾನನಿಲ್ದಾಣಕ್ಕೆ ತೆರಳುವ ಬೃಹತ್ ರಸ್ತೆ, ಈಶ್ವರಕಟ್ಟೆಯಲ್ಲಿ ಐದು ಕೋಟಿ ವೆಚ್ಚದ ರಸ್ತಗಳು ಸೇರಿದಂತೆ ಹಲವು ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆ ಎಂದರು.
ಮಳಲಿಯಿಂದ ಪೊಳಲಿಗೆ ಅನುದಾನ ನೀಡಿ ಕೆಲಸ ಪ್ರಾರಂಭವಾಗಿದೆ. ಎಡಪದವು ಭಾಗದಲ್ಲಿ ಅನೇಕ ಕಾಮಗಾರಿ ನಡೆಸಲಾಗಿದೆ. ತೊಂದರೆಯಿಂದ ಬಳಲುತ್ತಿರುವವರಿಗೆ ಮುಖ್ಯಮಂತ್ರಿನಿಧಿಯಿಂದ ಐದು ಲಕ್ಷ ರೂ.ನಂತೆ ಸಹಾಯಧನ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಎಸ್ಸಿ-ಎಸ್ಟಿ ಜನಾಂಗಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನಗಳ ಪಟ್ಟಿ ಬಿಡುಗಡೆ ಮಾಡಿದರೆ ಗುರುಪುರ ಬ್ಲಾಕ್ವೊಂದಕ್ಕೆ 500ರಿಂದ 600 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಎಡಪದವು ವ್ಯಾಪ್ತಿಯ ಮುತ್ತೂರಿನಲ್ಲಿ ಸೇತುವೆ ಬಿದ್ದು ವರ್ಷ ಕಳೆದರೂ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಲು ಅಲ್ಲಿನ ಶಾಸಕ, ಸಂಸದರಿಗೂ ಆಗಲಿಲ್ಲ. ಸೇತುವೆಯನ್ನು ಸ್ಥಳೀಯರೇ ನಿರ್ಮಾಣ ಮಾಡುವಂತಹ ಪರಿಸ್ಥಿತಿ ಬಂದಿದೆ. ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವ ಸುರತ್ಕಲ್ನಲ್ಲಿ ಟೋಲ್ಗೇಟ್ ಇದ್ದು, ತಮ್ಮ ಹೋರಾಟದ ಫಲವಾಗಿ ವರ್ಷಗಳ ಕಾಲ ಕೆ.ಎ.19 ನಂಬರ್ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಸಂಸದರು ಹಲವು ಬಾರಿ ಹೇಳಿಕೆ ಕೊಟ್ಟೂ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ಸಂಸದರು ಎಡವಿದ್ದಾರೆ ಎಂದು ಟೀಕಿಸಿದರು.
ನಳಿನ್ಕುಮಾರ್ ಕಟೀಲ್ ಬೊಗಳೆ ಬಿಡುವುದನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅಧಿಕಾರಿಗಳನ್ನು ಕರೆದು ಮಾತನಾಡುವ ಚಾಕಚಕ್ಯತೆಯೂ ಅವರಲ್ಲಿಲ್ಲ. ಈ ಭಾಗದಲ್ಲಿ ಹಿಂದಿನ ಕಾಂಗ್ರೆಸ್ ಸಂಸದರು ಎಂಆರ್ಪಿಎಲ್, ವಿಮಾನನಿಲ್ದಾಣಗಳನ್ನು ಸ್ಥಾಪಿಸಿದರು. ಆದರೆ ಈಗಿನ ಸಂಸದರಿಗೆ ಸಂಸತ್ನಲ್ಲಿ ಮಾತನಾಡುವ ಕಲೆಯೂ ತಿಳಿದಿಲ್ಲ. ಇನ್ನು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವುದು ಕನ್ನಡಿಯ ಗಂಟು ಎಂದು ವ್ಯಂಗ್ಯವಾಡಿದರು.
ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಿಥುನ್ ರೈ ಅವರನ್ನು ಜಿಲ್ಲೆಯ ಜನತೆ ಚುನಾಯಿಸಬೇಕು. ಮಿಥುನ್ ರೈ ಅವರು ತುಳು ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವಕನಿಗೆ ಜಿಲ್ಲೆಯ ಜನತೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ಆರ್.ಕೆ. ಪೃಥ್ವಿರಾಜ್, ಕೃಷ್ಣ ಅಮೀನ್, ಗಣೇಶ್ ಪೂಜಾರಿ, ಬಾಷಾ ಮಾಸ್ಟರ್, ಮೆಲ್ವಿನ್ ಮತ್ತಿತರರು ಉಪಸ್ಥಿತರಿದ್ದರು.