ಕಾಂಗ್ರೆಸ್ನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯ: ಶಾಲೆಟ್ ಪಿಂಟೊ
ಮಂಗಳೂರು, ಎ.15: ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಇತಿಹಾಸ ಹೊಂದಿದೆ. ಪಕ್ಷವು ಮಹಿಳೆಯರಿಗೆ ಕೊಟ್ಟ ಸೌಲಭ್ಯಗಳನ್ನು ಬೇರೆ ಯಾವುದೇ ಪಕ್ಷ ನೀಡಿಲ್ಲ. ನಮ್ಮಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯವಿದೆ ಎಂದು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಮಹಿಳೆಯರು ಸಬಲರಾಗಿ ಜನಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಳಮಟ್ಟದ ಗ್ರಾಪಂ, ಪಟ್ಟಣ ಪಂಚಾಯತ್, ತಾಪಂ, ಜಿಪಂ, ಮನಪಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಜೊತೆಗೆ ಜನರಲ್ ಕೆಟಗರಿಯಲ್ಲಿ ಶೇ.33ರಿಂದ 50ರವರೆಗೆ ಸ್ಥಾನಮಾನ ಕಲ್ಪಿಸಲಾಗಿದೆ ಎಂದರು.
‘ಬೇಟಿ ಬಜಾವೋ ಬೇಟಿ ಪಡಾವೊ’, ‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಧ್ಯೇಯದೊಂದಿಗೆ ನರೇಂದ್ರ ಮೋದಿ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಅಭಿವೃದ್ಧಿಗೆ ಪೂರಕವಾಗಿ ಆಡಳಿತ ನಡೆಸುವುದಾಗಿ ವಾಗ್ದಾನ ನೀಡಿದ್ದರು. ಆದರೆ, ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲೇ ಶಾಸಕನೊಬ್ಬನಿಂದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಇಂತಹ ಸಂದರ್ಭದಲ್ಲಿ ಮೋದಿಯವರು ಎಲ್ಲಿದ್ದರು ? ಆ ಸಂದರ್ಭ ಮಹಿಳೆಯರ ರಕ್ಷಣೆ ವಿಷಯವನ್ನು ಮರೆತುಬಿಟ್ಟರೇ ಎಂದು ಅವರು ಪ್ರಶ್ನಿಸಿದರು.
ದೇಶದಲ್ಲಿ ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ, ಹಲ್ಲೆಗಳು ನಡೆದಾಗ ಚೌಕಿದಾರ್ ಎಂದು ತನ್ನನ್ನು ಹೇಳಿಕೊಳ್ಳುತ್ತಿರುವ ನರೇಂದ್ರ ಮೋದಿ ಆಗ ಎಲ್ಲಿದ್ದರು. ಈಗ ಚುನಾವಣೆ ಬಂದ ತಕ್ಷಣ ಚೌಕಿದಾರ್ ಎಂದು ಹೇಳಿ ಮತಯಾಚಿಸುತ್ತಿದ್ದಾರೆ. ಅಚ್ಚೇದಿನ್ ಬುರೇ ದಿನ್ ಆದ ಬಳಿಕ ಹೊಸ ‘ಚೌಕಿದಾರ್’ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇಂತಹ ಪ್ರಧಾನಿ ದೇಶಕ್ಕೆ ಅಗತ್ಯವಿಲ್ಲ ಎಂದು ತಿಳಿಸಿದರು.
2014ರಲ್ಲಿ ನರೇಂದ್ರ ಮೋದಿ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಭರವಸೆ ನೀಡಿತ್ತು. ಈಗ ಪ್ರಣಾಳಿಕೆಯಲ್ಲಿ ಮತ್ತೆ ಅದೇ ಭರವಸೆ ನೀಡಲಾಗಿದೆ. ಬಿಜೆಪಿಯನ್ನು ನಂಬಲಸಾಧ್ಯ. ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜನರಲ್ ಕೆಟಗರಿಯಲ್ಲಿ ಪೈಪೋಟಿ ನಡೆಸಬೇಕಾದ ಪರಿಸ್ಥಿತಿಯಿದೆ. ಕಾಂಗ್ರೆಸ್ನಿಂದಲೇ ಎಲ್ಲ ಭರವಸೆಗಳು ಈಡೇರುತ್ತವೆ ಎಂದರು.
ಜಿಲ್ಲೆಯ ಯುವಕರು ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ. ಹಾಗಾಗಿ ಸಮರ್ಥ ಅಭ್ಯರ್ಥಿಯನ್ನು ಚುನಾಯಿಸುವ ಜವಾಬ್ದಾರಿ ಜಿಲ್ಲೆಯ ಜನತೆಯ ಮೇಲಿದೆ. ಯುವಕರ ಕಣ್ಮಣಿ ಮಿಥುನ್ ರೈಗೆ ಮತ ನೀಡಿ, ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ನ ಉಪಾಧ್ಯಕ್ಷೆ ಭಾರತಿ ಬಿ.ಎಂ., ಮರಿಯಮ್ಮ ಥಾಮಸ್, ಹಿಲ್ಡಾ ಆಳ್ವ, ನಮಿತಾ ಡಿ. ರಾವ್, ಶೋಭಾ ಕೇಶವ್, ತನ್ವೀರ್, ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.