ನಳಿನ್ ಕುಮಾರ್ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ: ಡಿಕೆಶಿ
ಮಂಗಳೂರು, ಎ.15: ಕಳೆದ 10 ವರ್ಷದಲ್ಲಿ ಈ ಕ್ಷೇತ್ರದ ಸಂಸದ, ಬಿಜೆಪಿ ಅಭ್ಯರ್ಥಿ ಅಭಿವೃದ್ಧಿ ವಿಚಾರದಲ್ಲಿ ಮಾಡಿದ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲೆಯ ಪ್ರವಾಸೋದ್ಯಮ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಒಳ್ಳೆಯ ಅವಕಾಶವಿತ್ತು. ಆದರೆ, ನಳಿನ್ ತನಗಿದ್ದ ಒಳ್ಳೆಯ ಅವಕಾಶವನ್ನು ಕೂಡ ಕಳಕೊಂಡರು. ಈ ಕ್ಷೇತ್ರಕ್ಕಾಗಿ ಯಾವುದೇ ಹೊಸ ಯೋಜನೆಯನ್ನು ಕೂಡ ನಳಿನ್ ತಂದಿಲ್ಲ. ಜಿಲ್ಲೆಯ ಜನರು ಉದ್ಯೋಗವಿಲ್ಲದೆ ಬೇರೆ ಬೇರೆ ಕಡೆ ವಲಸೆ ಹೋಗುತ್ತಿದ್ದರೂ ಕೂಡ ಅವರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸುವ ಮೂಲಕ ಪಾರ್ಲಿಮೆಂಟ್ನಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿ ಎತ್ತುವಂತೆ ಮಾಡಬೇಕು ಎಂದರು.
ನಳಿನ್, ಶೋಭಾ ಕರಂದ್ಲಾಜೆ, ಸದಾನಂದ ಗೌಡರು ಕರಾವಳಿಯ ಅಭಿವೃದ್ದಿಗೆ ಕೇಂದ್ರದ ಮೇಲೆ ಒತ್ತಡ ಹಾಕಬಹುದಿತ್ತು. ವಿಜಯಾ ಬ್ಯಾಂಕ್ ವಿಲೀನದ ವಿರುದ್ಧ ರಾಜ್ಯದ 28 ಸಂಸದರ ನಿಯೋಗವನ್ನು ಪ್ರಧಾನಿ ಬಳಿ ಕರೆದುಕೊಂಡು ಹೋಗಬಹುದಿತ್ತು. ಆದರೆ, ಅಧಿಕಾರದ ಆಸೆಗಾಗಿ ಬಿಜೆಪಿಯ ಸಂಸದರು, ಸಚಿವರು ವೌನವಾಗಿಬಿಟ್ಟರು ಎಂದ ಡಿಕೆಶಿ, ಜಿಲ್ಲೆಯ ಜನತೆ ಬದಲಾವಣೆಯನ್ನು ಬಯಸಿದ್ದಾರೆ. ಹನುಮಂತನ ಭಕ್ತ, ಬಂಟ ಯುವಕ, ಹಿಂದೂ ಸಂಸ್ಕೃತಿ ಮತ್ತು ಜಾತ್ಯತೀತ ತತ್ವದಲ್ಲಿ ಅಪಾರ ನಂಬಿಕೆಯುಳ್ಳ ಮಿಥುನ್ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ನಾಯಕನಾಗುವ ಮುನ್ನ ಸೇವಕನಾದ ಮಿಥುನ್ ಬಂಡೆಕಲ್ಲಿನ ಹಾಗೆ. ಕಡೆದರೆ ಆಕೃತಿಯಂತೆ, ಪೂಜಿಸಿದರೆ ಸಂಸ್ಕೃತಿಯಂತಹ ಕ್ರಿಯಾಶೀಲ ಮಿಥುನ್ ಗೆದ್ದಲ್ಲಿ ನಳಿನ್ರ ಹಾಗೆ ಎಂದಿಗೂ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಬಲದಾಗಿ ಅಭಿವೃದ್ದಿ ಕಾರ್ಯ ಮಾಡಿ ತೋರಿಸಲಿದ್ದಾರೆ ಎಂದು ಹೇಳಿದರು.
ಮಂಗಳೂರು ಕರ್ನಾಟಕದ ಹೃದಯವಿದ್ದ ಹಾಗೆ, ಈ ಹೃದಯವನ್ನು ಕಿತ್ತರೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಮಿಥುನ್ರ ಹೃದಯ ವೈಶಾಲ್ಯವಿರುವ ಯುವಕನನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಸೋಲಿಗೆ ಇಲ್ಲಿಂದಲೇ ಮುನ್ನುಡಿ ಬರೆಯಬೇಕಾಗಿದೆ. ಸತತ 28 ವರ್ಷದಿಂದ ಬಿಜೆಪಿ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಬಿಡಿಸಿಕೊಳ್ಳಲು ಮತದಾರರು ಮುಕ್ತ ಮನಸ್ಸು ಮಾಡಬೇಕು ಎಂದು ಡಿಕೆಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಪಕ್ಷದ ನಾಯಕರಾದ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್ಗಳಾದ ಭಾಸ್ಕರ್ ಮೊಯ್ಲಿ, ಮಹಾಬಲ ಮಾರ್ಲ, ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ನವೀನ್ ಡಿಸೋಜ, ಸಂತೋಷ್ ಶೆಟ್ಟಿ, ಎ.ಸಿ.ವಿನಯರಾಜ್, ಎ.ಸಿ.ಭಂಡಾರಿ, ಪ್ರಶಾಂತ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಜೇಬು ತಪಾಸಣೆ
ಮಂಗಳೂರು ವಿಮಾನ ನಿಲ್ದಾಣ ಇಳಿಯಬೇಕಾದರೆ ಅಧಿಕಾರಿಗಳು ನಮ್ಮ ಕಾರು, ಜೇಬು ತಪಾಸಣೆ ಮಾಡಿದರು. ಅದೇ ಕೇಂದ್ರ ಸಚಿವ ಸುರೇಶ್ ಪ್ರಭು ಅವರನ್ನು ಯಾವುದೇ ತಪಾಸಣೆ ಮಾಡದೆ ಬಿಟ್ಟುಬಿಟ್ಟರು. ಇದು ಅಧಿಕಾರಿಗಳಿಗೆ ನಮ್ಮ ಮೇಲೆ ಇರುವ ಪ್ರೀತಿಗೆ ಸಾಕ್ಷಿ ಎಂದು ಡಿಕೆಶಿ ವ್ಯಂಗ್ಯವಾಡಿದರು.
ನಮಗೇ ಹೆಚ್ಚು ಲಾಭ
ಮೈತ್ರಿಯಿಂದ ಚುನಾವಣೆಯಲ್ಲಿ ಅವರಿಗಿಂತ (ಜೆಡಿಎಸ್) ನಮಗೆ (ಕಾಂಗ್ರೆಸ್) ಹೆಚ್ಚು ಲಾಭವಾಗಲಿದೆ. ಬಿಜೆಪಿ ಎರಡಂಕೆಯನ್ನು ಕೂಡ ದಾಟುವುದಿಲ್ಲ. ಮೈತ್ರಿ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಸಹಿತ ಜೆಡಿಎಸ್ ನಾಯಕರು ರಾಜ್ಯದಾದ್ಯಂತ ಹೆಚ್ಚು ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಮಗೆ ಅನುಕೂಲವಾಗಿದೆ ಎಂದರು.
ಹಿಂದುತ್ವ ಯಾರದೇ ಸೊತ್ತಲ್ಲ
ಹಿಂದುತ್ವ ಯಾರದೇ ಸೊತ್ತಲ್ಲ. ಕೇಸರಿ ಶಾಲ್ ಕೂಡ ಯಾರದ್ದೂ ಅಲ್ಲ. ಅದು ತ್ರಿವರ್ಣ ಧ್ವಜದ ಬಣ್ಣದಲ್ಲೊಂದು. ಇದರಿಂದ ನಮಗೆ ಹಾನಿ ಏನೂ ಇಲ್ಲ.
ವ್ಯಕ್ತಿ ಪೂಜೆ ಮಾಡುವುದಿಲ್ಲ
ನಾವು ವ್ಯಕ್ತಿ ಪೂಜೆ ಮಾಡುವುದಿಲ್ಲ. ಪಕ್ಷ ಪೂಜೆ ಮಾಡುತ್ತೇವೆ. ಮಂಡ್ಯದಲ್ಲಿ ಕೆಲವು ನಾಯಕರ ಮಧ್ಯೆ ಅಸಮಾಧಾನವಿರಬಹುದು. ಶೇ.99ರಷ್ಟು ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯ ಪರ ಇದ್ದಾರೆ.
ರಾಜಕಾರಣ ಬೇಡ
ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಆದರೆ, ಧರ್ಮದಲ್ಲಿ ರಾಜಕಾರಣ ಬೇಡ, ರಾಜಕಾರಣದಲ್ಲಿ ಧರ್ಮವಷ್ಟೇ ಇರಲಿ.
ಐಟಿ ನೋಟಿಸ್ ಬಂದಿದೆ
ಕಾಂಗ್ರೆಸ್-ಜೆಡಿಎಸ್ ನಾಯಕರು ಮತ್ತವರ ಆಪ್ತರ ಮನೆ, ಕಚೇರಿಯನ್ನು ಗುರಿಯಾಗಿಸಿಕೊಂಡು ಐಟಿ ಅಧಿಕಾರಿಗಳು ದಾಳಿ ಮಾಡಿಾಗ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟಿಸಿದ್ದು ಹೌದು. ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸಹಿತ ನಾವು ವಾಸ್ತವ ತಿಳಿಹೇಳಲು ಐಟಿ ಅಧಿಕಾರಿಗಳ ಬಳಿ ಹೋಗಿದ್ದೇವೆ. ನಮಗೀಗ ನೋಟಿಸ್ ಬಂದಿದೆ. ಸಕಾಲಕ್ಕೆ ಅದಕ್ಕೆ ಉತ್ತರ ನೀಡುತ್ತೇವೆ.