ರಾಜ್ಯ ಸರಕಾರದ ಅಭಿವೃದ್ಧಿಯೇ ನನ್ನ ಗೆಲುವಿಗೆ ಶ್ರೀರಕ್ಷೆ: ಪ್ರಮೋದ್ ಮಧ್ವರಾಜ್
ಉಡುಪಿ, ಎ.15: ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರೂಪಿಸಲಾಗಿದ್ದ ಯೋಜನೆಗಳೊಂದಿಗೆ ಈಗಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರವು ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕಳಸದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯ ಕರ್ತರ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದ ಸಂವಿಧಾನವನ್ನು ನೀಡುವ ಮೂಲಕ ದೇಶದ ಜನರ ಜೀವನ ಮಟ್ಟವನ್ನು ಉನ್ನತಿಗೇರಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಶಿಕ್ಷಣ, ಆರೋಗ್ಯ, ವಿಜ್ಞಾನ, ಬ್ಯಾಂಕಿಂಗ್, ಕೃಷಿ ಮುಂತಾದ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಪ್ರಾದ್ಯಾನ್ಯತೆ ನೀಡುವ ಮೂಲಕ ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ಭಾರತ ದೇಶವು ಮುಂಚೂಣಿ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದರು.
ಕಾಂಗ್ರೆಸ್ ಎಂದರೆ ಅದು ಕೇವಲ ಪಕ್ಷವಲ್ಲ ಅದು ಅಭಿವೃದ್ಧಿಯ ಸಂಕೇತವೂ ಕೂಡಾ. ಸಿದ್ಧರಾಮಯ್ಯ ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿಯನ್ನು ಕಂಡಿತ್ತಿಲ್ಲದೆ ಅನ್ನ ಭಾಗ್ಯ, ಪಶುಭಾಗ್ಯ ಯೋಜನೆ, ವಸತಿ ಯೋಜನೆ, ಮನಸ್ವಿನಿ, ಮಾತೃಪೂರ್ಣ, ವಿದ್ಯಾಸಿರಿ, ಶಾದಿ ಭಾಗ್ಯ, ಅನಿಲ ಭಾಗ್ಯ, ಅಂಗವಿಕಲ ವೇತನ ಹಾಗೂ ವೃದ್ದಾಪ್ಯವೇತನ, ಪುನರ್ಬೆಳಕು ಯೋಜನೆಗಳಂತಹ ಎಲ್ಲಾ ವರ್ಗಗಳಿಗೂ ಬೆಂಬಲ ನೀಡುವ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಅವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿಗಾಗಿ ಸ್ಮಾರ್ಟ್ ಗ್ರಾಪಂ, ನಗರಾಭಿವೃದ್ಧಿಗಾಗಿ ಸ್ಮಾಟ್ ಸಿಟಿ ಯೋಜನೆಯನ್ನು ರೂಪಿಸಿ ಗ್ರಾಮೀಣ ಹಾಗೂ ನಗರದ ಆಭಿವೃದ್ಧಿಗಾಗಿ ಸರಕಾರ ಹೆಚ್ಚಿನ ಆಧ್ಯತೆ ನೀಡಿತ್ತು. ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯ ದೃಢವಾದ ಬೆಳವಣಿಗೆಯನ್ನು ಕಂಡಿದೆ. ತನ್ನ ಎಲ್ಲಾ ಆರ್ಥಿಕ ಸುಧಾರಣೆಯಲ್ಲೂ ಏರಿಕೆಯನ್ನು ದಾಖಲಿಸಿದೆ. ದ.ಕ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಅಭಿವೃದ್ದಿೆ ಯೋಜನೆ ರೂಪಿಸಲಾಗಿತ್ತು ಎಂದರು.
ಜನಗಳ ಮಧ್ಯೆ ಹೋಗದೆ ಕೆಲಸವನ್ನು ಮಾಡದೆ ಇರುವವರು ಗೆಲ್ಲುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿರುವಾಗ ಜನಸಾಮ್ಯಾನ್ಯರ ಮಧ್ಯೆ ಇದ್ದು ಕೆಲಸ ಮಾಡಿದ, ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ದ ನನ್ನನ್ನು ಕ್ಷೇತ್ರದ ಜನತೆ ಬೆಂಬಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮೋದಿ ಅಲೆಯಲ್ಲಿ ಗೆದ್ದವರು ಹೆಸರನ್ನು ಉಳಿಸಿಕೊಳ್ಳಲಿಲ್ಲ. ಮೋದಿಯೂ ದೇಶದ ಜನತೆಗೆ ನೀಡಿದ ಭರವಸೆ ಈಡೇರಿಸಿಲ್ಲ ಎಂದು ಅವರು ಟೀಕಿಸಿದರು.
ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.