ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಲು ಅಹಿಂದ ಆಗ್ರಹ
ಮಂಗಳೂರು, ಎ.16: ದೇಶದಲ್ಲಿ ಜಾತ್ಯತೀತ ಶಕ್ತಿಯನ್ನು ಬಲಪಡಿಸಲು ಮತ್ತು ಅಹಿಂದ ವರ್ಗಕ್ಕೆ ಮತ್ತಷ್ಟು ಶಕ್ತಿ ನೀಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ದ.ಕ. ಜಿಲ್ಲಾ ಅಹಿಂದ ಜನ ಚಳವಳಿ ಆಗ್ರಹಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದರಾಮಯ್ಯ ಈಗಾಗಲೆ ಅಹಿಂದ ವರ್ಗಕ್ಕೆ ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ. ಹಾಗಾಗಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಯುವ ನಾಯಕ, ಜಾತ್ಯತೀತ ತತ್ವದ ಮೇಲೆ ಅಪಾರ ನಂಬಿಕೆಯುಳ್ಳ ಮಿಥುನ್ ರೈ ಅವರನ್ನು ಅಹಿಂದ ವರ್ಗ ಸಹಿತ ಎಲ್ಲರೂ ಮತ ನೀಡಿ ಗೆಲ್ಲಿಸಬೇಕು ಎಂದರು.
ದ.ಕ. ಜಿಲ್ಲೆಯಲ್ಲಿ ಶೇ.52 ಹಿಂದುಳಿದ ಜಾತಿ, ಶೇ.23 ದಲಿತರು, ಶೇ.18 ಅಲ್ಪಸಂಖ್ಯಾತ ವರ್ಗದ ಜನರಿದ್ದಾರೆ. ಈ ಅಹಿಂದ ವರ್ಗಕ್ಕೆ ಬಹುತೇಕ ಎಲ್ಲಾ ರಾಜಕೀಯ ಧುರೀಣರು ಸೂಕ್ತ ಅವಕಾಶ ನೀಡದೆ ವಂಚಿಸುತ್ತಾ ಬಂದಿದ್ದಾರೆ. ಆ ಹಿನ್ನಲೆಯಲ್ಲಿ ಅಹಿಂದ ವರ್ಗವು ರಾಜಕೀಯವಾಗಿ ಪ್ರಬಲಗೊಳ್ಳಲು ಈ ಬಾರಿಯ ಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಅಹಿಂದ ಜನ ಚಳವಳಿಯ ಅಧ್ಯಕ್ಷ ವಾಸುದೇವ ಬೋಳೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಕೋಶಾಧಿಕಾರಿ ವಲೇರಿಯನ್ ಎಸ್.ಆರ್.ಲೋಬೊ, ಸಂಘಟನಾ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಸದಸ್ಯೆ ರಮಣಿ ಉಪಸ್ಥಿತರಿದ್ದರು.