ಬಿಜೆಪಿಯನ್ನು ಸೋಲಿಸಲು ಸಿಪಿಎಂ ಕರೆ
ಮಂಗಳೂರು, ಎ.16: ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಯುವಜನರಿಗೆ ಭರವಸೆ ನೀಡಿ ಅಧಿಕಾರಕ್ಕೇರಿದ ಬಳಿಕ ಮೇಕ್ ಇನ್ ಇಂಡಿಯಾ ಘೋಷಣೆ ಮೊಳಗಿಸಿ ಜಗತ್ತಿನ 60ಕ್ಕೂ ಅಧಿಕ ದೇಶಗಳಿಗೆ ಪ್ರದಕ್ಷಿಣೆ ಹಾಕಿ ಶೋಕಿ ಜೀವನವನ್ನು ನಡೆಸಿದ ನರೇಂದ್ರ ಮೋದಿ ಕಳೆದ 5 ವರ್ಷಗಳಲ್ಲಿ10 ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು. ಆದರೆ ಕೇವಲ 10 ಲಕ್ಷ ಉದ್ಯೋಗ ಸೃಷ್ಟಿಸಿ ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿದ್ದಾರೆ. ಹಾಗಾಗಿ ಭವಿಷ್ಯದ ಹಿತದೃಷ್ಟಿಯಿಂದ ಯುವ ಜನತೆ ಬಿಜೆಪಿಯನ್ನು ಸೋಲಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ಬಜಾಲ್ ಆತಂಕ ವ್ಯಕ್ತಪಡಿಸಿದರು.
ಬಜಾಲ್ ಪಕ್ಕಲಡ್ಕದಲ್ಲಿ ಇತ್ತೀಚೆಗೆ ಜರುಗಿದ ಸಿಪಿಎಂ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 5 ವರ್ಷಗಳ ಅವಧಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಕೋಟ್ಯಾಂತರ ಯುವಜನರು ಅರ್ಜಿ ಹಾಕಿರುವುದು ದೇಶದ ನಿರುದ್ಯೋಗ ಸಮಸ್ಯೆಯ ಕರಾಳತೆಗೆ ಸಾಕ್ಷಿಯಾಗಿದೆ. ಆದರೂ ಕೇಂದ್ರ ಸಚಿವ ಅರುಣ್ ಜೇಟ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಪಕೋಡಾ ಮಾರಿ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಯುವಜನತೆಯನ್ನು ಅವಮಾನ ಮಾಡಿದ್ದಾರೆ. ಇಂತಹ ಯುವಜನ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಬೇಕು ಎಂದು ಸಂತೋಷ್ ಕುಮಾರ್ ಬಜಾಲ್ ಆಗ್ರಹಿಸಿದರು.
ಸಿಪಿಎಂ ಹಿರಿಯ ಸದಸ್ಯ ಅಶೋಕ್ ಸಾಲ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಎಂ ಮುಖಂಡರಾದ ಸುರೇಶ್ ಬಜಾಲ್, ದೀಪಕ್ ಬಜಾಲ್, ನಾಗರಾಜ್ ಬಜಾಲ್, ವರಪ್ರಸಾದ್ ಬಜಾಲ್ ಉಪಸ್ಥಿತರಿದ್ದರು.