ಬಿಜೆಪಿ ವಿರುದ್ಧ ಮತ ಚಲಾಯಿಸಲು ಕಟ್ಟಡ ಕಾರ್ಮಿಕರಿಗೆ ಸಿಡಬ್ಲುಎಫ್ ಕರೆ
ಮಂಗಳೂರು, ಎ.16: ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ನೀತಿಗಳನ್ನು ಜಾರಿಗೊಳಿಸಿ ಕೋಟ್ಯಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿ ಗಳನ್ನಾಗಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಬೇಕು ಹಾಗೂ ಬಿಜೆಪಿಯ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಬೇಕು ಎಂದು ಸಿಐಟಿಯು ಸಂಯೋಜಿತ ದ.ಕ. ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಡಬ್ಲುಎಫ್)ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ಕರೆ ನೀಡಿದೆ.
2014ರಲ್ಲಿ ‘ಸಬ್ ಕಾ ಸಾಥ್-ಸಬ್ಕಾ ವಿಕಾಸ್’ ಎನ್ನುವ ಘೋಷಣೆಯೊಂದಿಗೆ ಅತಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಹಾಗೂ ಎನ್ಡಿಎ ಮಿತ್ರ ಪಕ್ಷಗಳು ಪಡೆದಿ ದ್ದವು. ಆದರೆ ತಾನು ಅಂಗೀಕರಿಸಿದ ಘೋಷಣೆಗೆ ವಿರುದ್ದವಾಗಿ ಹೆಜ್ಜೆ ಹಾಕಿದ ನರೇಂದ್ರ ಮೋದಿ ಸರಕಾರವು ದೇಶದ ಕಾರ್ಮಿಕ ವರ್ಗ ಸ್ವಾತಂತ್ರ್ಯ ಪೂರ್ವ ದಿಂದ ಹೋರಾಡಿ ತ್ಯಾಗ ಬಲಿದಾನದಿಂದ ಗಳಿಸಿದ್ದ 44 ಕಾರ್ಮಿಕರ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಲು ಮುಂದಾಗಿರುವುದು ಖಂಡನೀಯವಾಗಿದೆ ಎಂದು ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ತಿಳಿಸಿದ್ದಾರೆ.