ದ್ವೇಷದ ರಾಜಕಾರಣದ ವಿರುದ್ಧ ಮತ ಚಲಾಯಿಸಲು ‘ಸಮುದಾಯ’ ಕರೆ
ಮಂಗಳೂರು, ಎ.16: ಲೋಕಸಭಾ ಚುನಾವಣೆಯು ದೇಶವು ಒಂದು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ನಡೆಯುತ್ತಿವೆ. ದೇಶದ ಸಂವಿಧಾನವು ಎಲ್ಲಾ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ತಾವು ಆಯ್ಕೆ ಮಾಡುವ ಆಹಾರವನ್ನು ಉಣ್ಣುವ, ತಮ್ಮಿಚ್ಛೆಯಂತೆ ಆರಾಧಿಸುವ ಮತ್ತು ಜೀವಿಸುವ ಸ್ವಾತಂತ್ರವನ್ನು, ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಮತ್ತು ಭಿನ್ನಮತ ಹೊಂದುವ ಹಕ್ಕನ್ನು ಒದಗಿಸಿರುತ್ತದೆ.
ಆದರೆ ಕೆಲವು ವರ್ಷಗಳಲ್ಲಿ ಕೆಲವು ಪ್ರಜೆಗಳನ್ನು ಜನಾಂಗ, ಜಾತಿ, ಲಿಂಗ ಅಥವಾ ಪ್ರದೇಶದ ಆಧಾರದಲ್ಲಿ ತಾರತಮ್ಯಕ್ಕೆ ಒಳಪಡಿಸುವುದನ್ನೂ ಅವರ ಮೇಲೆ ದಾಳಿ ಮಾಡಲಾಗುತ್ತದೆ. ದ್ವೇಷದ ರಾಜಕಾರಣವು ದೇಶವನ್ನು ಒಡೆಯಲು ಹಾಗೂ ಭೀತಿ ಹುಟ್ಟಿಸಲು ಬಳಕೆಯಾಗುತ್ತಿದೆ. ಸಾಹಿತಿಗಳು, ಕಲಾವಿದರು, ಸಿನಿಮಾ ನಿರ್ಮಾಪಕರು, ಸಂಗೀತಗಾರರು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕರ್ತರನ್ನು ಭಯಭೀತಿಗೊಳಿಸಲಾಗಿದೆ. ಅಧಿಕಾರವನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಒಂದೋ ಪೀಡನೆಗೊಳಪಡಿಸಲಾಗುತ್ತಿದೆ. ಇಲ್ಲವೇ ಸುಳ್ಳು ದೇಶದ್ರೋಹ ಹಾಗೂ ಕ್ಷುದ್ರ ಆರೋಪಗಳ ಮೇಲೆ ಬಂಧಿಸಲಾಗುತ್ತಿದೆ.
ಆ ಹಿನ್ನಲೆಯಲ್ಲಿ ದ್ವೇಷದ ರಾಜಕಾರಣದ ವಿರುದ್ಧ ಮತ ಚಲಾಯಿಸಬೇಕು ಎಂದು ‘ಸಮುದಾಯ ಕರ್ನಾಟಕ’ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಕರೆ ನೀಡಿದ್ದಾರೆ.
ದ್ವೇಷದ ರಾಜಕಾರಣವನ್ನು ಮತದಾನದ ಮೂಲಕ ಹೊರಗಟ್ಟಬೇಕಿದೆ. ಜನತೆಯನ್ನು ಒಡೆಯುವುದನ್ನು ತಡೆಯಲು ಮತದಾರ ಜಾಗೃತರಾಗಬೇಕು. ಅಸಮಾನತೆ, ಹಿಂಸೆ, ಭೀತಿ ಹುಟ್ಟಿಸುವುದನ್ನು ಮತ್ತು ಸೆನ್ಸಾರ್ಶಿಪ್ ವಿರುದ್ಧ ಮತದಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.