ಚುನಾವಣಾ ಆಯೋಗದ ಕ್ರಮ ಸರಿ: ಕೇಂದ್ರ ಸಚಿವ ತಾವರ್ ಚಂದ್
ಯೋಗಿ ಆದಿತ್ಯನಾಥ್ಗೆ ಪ್ರಚಾರ ನಿಷೇಧ ಪ್ರಕರಣ
ಮಂಗಳೂರು, ಎ.16 : ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಮೂರು ದಿನಗಳ ಪ್ರಚಾರ ನಿಷೇಧ ಮಾಡಿರುವ ಚುನಾವಣಾ ಆಯೋಗದ ಕ್ರಮ ಸರಿಯಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಪರ ಚುನಾವಣಾಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪ್ರಚೋದನಕಾರಿ, ವಿವಾದಾತ್ಮಕ ಮಾತುಗಳ ಬಗ್ಗೆ ದೂರಿನ ಮೇರೆಗೆ ಕ್ರಮ ಕೈಗೊಳ್ಳುತ್ತದೆ. ಸ್ವಯಂ ಪ್ರೇರಿತವಾಗಿಯೂ ಕ್ರಮ ಕೈಗೊಳ್ಳುವ ಅವಕಾಶ ಆಯೋಗಕ್ಕಿದೆ. ಹಾಗಾಗಿ ಅದು ಮಾಡಿರುವ ಕ್ರಮ ಸರಿಯಾಗಿದೆ ಎಂದರು.
ದೇಶದಲ್ಲಿ ವಿರೋಧ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ.ವಂಶವಾದವನ್ನು ಮುಂದುವರಿಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ವ್ಯಕ್ತಿಗಳಿದ್ದರೂ ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಿದ ಅವರು, ಈಗಾಗಲೇ ನಡೆದಿರುವ ಪ್ರಥಮ ಹಂತದ ಮತದಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಹವಾ ಕಂಡುಬಂದಿದ್ದು, ಎ. 18ರಂದು ನಡೆಯಲಿರುವ ದ್ವಿತೀಯ ಹಂತದ ಮತದಾನಕ್ಕೂ ಈ ಅಲೆ ಎಲ್ಲೆಡೆ ವ್ಯಕ್ತವಾಗಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರೂ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಜನತೆ ವಂಶವಾದವ್ನ ನಿರಾಕರಿಸುವ ಮೂಡ್ನಲ್ಲಿದ್ದಾರೆ ಎಂದರು.
ವಿರೋಧ ಪಕ್ಷ ವಿಕಾಸವಾದದ ಬಗ್ಗೆ ಮಾತನಾಡುವ ಬದಲು ಜನರನ್ನು ಗೊಂದಲಕ್ಕೀಡುಮಾಡುವ ಉದ್ದೇಶದಿಂದ ಆರೋಪಗಳನ್ನು, ಅಸತ್ಯವನ್ನು ಮಾತ್ರವೇ ಹೇಳುತ್ತಿದೆ. ಸ್ವಾತಂತ್ರ ಸಂದರ್ಭದಲ್ಲಿ ಮಹಾತ್ಮಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೂ ಇಂದಿನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದ ಸರಕಾರಕ್ಕೂ ಯಾವುದೇ ಸಮಾನತೆ ಇಲ್ಲ. ಸ್ವಾತಂತ್ರ ಸಂದರ್ಭದಲ್ಲಿ ಗಾಂಧಿಯವರು ವಂದೇಮಾತರಂ ಮೂಲಕ ಹೋರಾಟ ನಡೆಸಿದ್ದರೆ, ಇಂದಿನ ಗಾಂಧಿ ಕುಟುಂಬಕ್ಕೆ ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಅಪಥ್ಯವಾಗಿವೆ. ದೇಶವನ್ನು ವಿಭಜಿಸುವ ವಿಷಯಗಳಿಗೆ ಅವರು ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಮೋದಿ ಸರಕಾರ ಮೂರನೆ ಎರಡು ಭಾಗ ಮತಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದ ಲಾಲಸೆಯಲ್ಲಿ ಆಡಳಿತ ನಡೆಸುತ್ತಿದೆಯೇ ವಿನಹ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿಲ್ಲ. ರಾಜ್ಯ ಸರಕಾರವು ಕೇಂದ್ರದಿಂದ ನೀಡಿದ ಅನುದಾನ ಬಳಕೆಯಲ್ಲೂ ವಿಫಲವಾಗಿದ್ದು, ಕೇಂದ್ರಕ್ಕೆ ಅನುದಾನ ಬಳಕೆಯ ಪ್ರಮಾಣ ಪತ್ರನ್ನೂ ಒದಗಿಸಿಲ್ಲ ಎಂದು ಆಪಾದಿಸಿದರು.
ಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ನಾಯಕರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.