ಮಿಥುನ್ ರೈ ಗೆಲುವು ಖಚಿತ: ವಿಶ್ವಾಸ್ಕುಮಾರ್ ದಾಸ್
ಮಂಗಳೂರು, ಎ.16: ದ.ಕ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮಂಗಳೂರು ನಗರ ಬ್ಲಾಕ್ನ 21 ವಾರ್ಡ್ಗಳಲ್ಲಿ ಕಳೆದ 17 ದಿನಗಳಿಂದ ಚುನಾವಣಾ ಪ್ರಚಾರ ಮಾಡಲಾಗಿದೆ. ಎಲ್ಲೆಡೆಯೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಿಥುನ್ ರೈ ಗೆಲುವು ಖಚಿತ ಎಂದು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ಕುಮಾರ್ ದಾಸ್ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುದ್ಧಿವಂತ ಸಮಾನ ಮನಸ್ಕ ಯುವಕರ ದಂಡೇ ಮಿಥುನ್ ರೈ ಗೆಲುವಿಗಾಗಿ ಪಣತೊಟ್ಟಿದೆ. ಜಿಲ್ಲೆಯ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಕಣದಲ್ಲಿರುವ ಇವರನ್ನು ಪ್ರಜ್ಞಾವಂತ ಮತದಾರರು, ಪಕ್ಷಭೇದ ಮರೆತು ಮಿಥುನ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನುಡಿದಂತೆ, ಸಾರ್ವಜನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ವಂಚಿತವಾಗಿ ನನೆಗುದಿಗೆ ಬಿದ್ದಿರುವ, ಆವಶ್ಯಕ ಕೆಲಸ ಕಾರ್ಯಗಳನ್ನು ಮಿಥುನ್ ರೈ ಗೆದ್ದು ಬಂದ ಬಳಿಕ ಕ್ಷಿಪ್ರವಾಗಿ ಅನುಷ್ಠಾನಕ್ಕೆ ತರಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಒಬ್ಬ ಸುಶಿಕ್ಷಿತ ಕ್ರಿಯಾಶೀಲ ಜನಪರ ನಡಿಗೆಯ ಮಿಥುನ್ ರೈ ಅವರನ್ನು ಗೆಲ್ಲಿಸಬೇಕು ಎಂದು ಜಿಲ್ಲೆಯ ಜನರಲ್ಲಿ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ನ ಮುಖಂಡರಾದ ಚೇತನ್, ಸಂಶುದ್ದೀನ್, ಶಾಂತಲಾ ಗಟ್ಟಿ, ರಘುನಾಥ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.