ವಿಚಾರಣಾಧೀನ ಕೈದಿ ಬಳಿ ಡ್ರಗ್ಸ್ ಸೇವಿಸುವ ಸಾಧನ, ಮೊಬೈಲ್ ಪತ್ತೆ
ಮಂಗಳೂರು ಕಾರಾಗೃಹಕ್ಕೆ ಪೊಲೀಸ್ ಆಯುಕ್ತರ ದಾಳಿ
ಮಂಗಳೂರು, ಎ.16: ನಗರದ ಸಬ್ಜೈಲ್ಗೆ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಮಂಗಳವಾರ ದಿಢೀರ್ ದಾಳಿ ನಡೆಸಿದ್ದು, ವಿಚಾರಣಾಧೀನ ಕೈದಿಗಳ ಬಳಿ ಎರಡು ಮೊಬೈಲ್, ಮೂರು ಸಿಮ್ ಕಾರ್ಡ್, ಎರಡು ಮೆಮೊರಿ ಕಾರ್ಡ್ ಹಾಗೂ ಡ್ರಗ್ಸ್ ಸೇವಿಸುವ ಸಾಧನ ಪತ್ತೆಯಾಗಿವೆ.
ಫೆ.24ರಂದು ಆಯುಕ್ತರ ನೇತೃತ್ವದಲ್ಲಿ ಜೈಲ್ಗೆ ದಿಢೀರ್ ದಾಳಿ ನಡೆಸಲಾಗಿತ್ತು. ಆ ಸಂದರ್ಭ ಆರು ಮೊಬೈಲ್, ಮೂರು ಚೂರಿ ಮೊದಲಾದ ಸೊತ್ತುಗಳು ಪತ್ತೆಯಾಗಿದ್ದವು. ಪೊಲೀಸರು ಆಗಾಗ ತಪಾಸಣೆ ನಡೆಸುವುದು ನಿರಂತರ ಪ್ರಕ್ರಿಯೆ. ಚುನಾವಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ತಪಾಸಣೆ ನಡೆಸಲಾಗಿದೆ.
ತನಿಖೆ ನಡೆಸಿ ಕ್ರಮ: ವಿಚಾರಣಾಧೀನ ಕೈದಿಗಳ ಬಳಿ ಪತ್ತೆಯಾದ ಮೊಬೈಲ್ ಸಂಖ್ಯೆಗಳಿಂದ ಯಾರಿಗೆಲ್ಲ ಕರೆ ಹೋಗಿದೆ. ಯಾರ ಜತೆ ಸಂಪರ್ಕ ಇಟ್ಟುಕೊಂಡು ದುಷ್ಕೃತ್ಯದಲ್ಲಿ ತೊಡಗಿದ್ದರು ಎನ್ನುವುದನ್ನು ತನಿಖೆ ನಡೆಸಲಾಗುವುದು. ಮೊಬೈಲ್ ಹಾಗೂ ಸಿಮ್ ಜೈಲ್ನೊಳಗೆ ಹೇಗೆ ಬಂತು ಎನ್ನುವುದರ ಬಗ್ಗೆಯೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸಬ್ ಜೈಲ್ನಲ್ಲಿ ಕೈಗಾರಿಕಾ ಭದ್ರತಾ ಪಡೆ ಹಾಗೂ ಜೈಲು ಸಿಬ್ಬಂದಿ ತಪಾಸಣೆ ನಡೆಸಿ ನಿಗಾ ಇಟ್ಟರೂ ಕೈದಿಗಳ ಬಳಿಗೆ ಮೊಬೈಲ್ ಹೇಗೆ ಸೇರುತ್ತದೆ ಎನ್ನುವುದು ಗಂಭೀರ ವಿಚಾರವಾಗಿದೆ. ಜೈಲು ಸಿಬ್ಬಂದಿ ಸಹಕಾರ ಇಲ್ಲದಿದ್ದರೆ ನಿಷೇಧಿತ ವಸ್ತುಗಳು ಒಳಗಡೆ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಪೊಲೀಸರು.
ಡಿಸಿಪಿಗಳು, ಎಸಿಪಿಗಳು, ಇನ್ಸ್ಪೆಕ್ಟರ್ಗಳು, ಪಿಎಸ್ಐಗಳು ಸೇರಿದಂತೆ 100ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.