‘ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಿಥುನ್ ರೈ ಬೆಂಬಲಿಸಿ’
ಮಂಗಳೂರು, ಎ.16: ಯುವಜನರಿಗೆ ಉದ್ಯೋಗಾವಕಾಶ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯುವನಾಯಕ, ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಯುವಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಜನರಲ್ಲಿ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣೆ ಘೋಷಣೆ ಆಗುವ ಮೊದಲೇ ತಾಲೂಕು ಮಟ್ಟದಲ್ಲಿ ವಿವಿಧ ತಂಡಗಳನ್ನು ರಚಿಸಿ ಜಿಲ್ಲೆಯ ಮೂಲೆ ಮೂಲೆಗಳಿಗೆ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದೇವೆ. ಪ್ರಚಾರ ವೇಳೆ ಮಿಥುನ್ ರೈ ಪರ ಜನರ ಒಲವು ವ್ಯಕ್ತವಾಗಿದೆ. ಜಿಲ್ಲೆಯ ಯುವಕರ ತಂಡವೇ ಮಿಥುನ್ ರೈ ಪರ ನಿಂತಿದೆ. ಅವರ ಗೆಲುವು ಖಚಿತ ಎಂದರು.
ಜಿಲ್ಲೆಯಲ್ಲಿರುವ ಹಲವು ಖಾಸಗಿ ಕಂಪೆನಿಗಳಲ್ಲಿ ಇಲ್ಲಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇಲ್ಲಿಯ ಸಂಸದರು ಸಂಪೂರ್ಣವಾಗಿ ವಿಲರಾಗಿದ್ದಾರೆ. ಮಿಥುನ್ ರೈ ಅವರು ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ ಉದ್ಯೋಗವಕಾಶ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಮೋದಿ ಹವಾ ಬದಲಾಗಿ ಮಿಥುನ್ ಹವಾ ಬಂದಾಗಿದೆ ಎಂದರು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಯೋಚಿಸಿ ಮತ ಚಲಾಯಿಸಿ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಹಮ್ಮದ್ ಝೀಲ್, ಮುಹಮ್ಮದ್ ಆಸಿಫ್, ರತೇಶ್ ಕರ್ಕೇರ, ಸಿಮಾನ್, ಹಿತೇಶ್ ರಾಜ್, ಲಿಖಿತ್ ರಾಜ್, ಮುಹಮ್ಮದ್ ರಝಾಕ್ ಉಪಸ್ಥಿತರಿದ್ದರು.