ಉಡುಪಿ: ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ
ಉಡುಪಿ, ಎ.17: ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ತಮಗೆ ನಿಯೋಜಿಸಿದ ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಚುನಾವಾಣಾ ಕರ್ತವ್ಯಕ್ಕೆ ತೆರಳಿರು.
ಕುಂದಾಪುರ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕುಂದಾಪುರ ಕ್ಷೇತ್ರದ, ಬ್ರಹ್ಮಗಿರಿ ಸೈಂಟ್ ಸಿಸಿಲಿಯಾ ಶಿಕ್ಷಣ ಸಂಸ್ಥೆಯಲ್ಲಿ ಉಡುಪಿ ಕ್ಷೇತ್ರದ, ಉಳಿಯಾರಗೋಳಿ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಕಾಪು ಕ್ಷೇತ್ರದ, ಕಾಬೆಟ್ಟು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಕಾರ್ಕಳ ಕ್ಷೇತ್ರದ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈ ನಾಲ್ಕು ಮಸ್ಟರಿಂಗ್ ಕೇಂದ್ರದಿಂದ ಒಟ್ಟು 6489(996 ಅಧ್ಯಕ್ಷಾಧಿಕಾರಿ, 996 ಸಹಾಯಕ ಅಧ್ಯಕ್ಷಾಧಿಕಾರಿ, 1972 ಮತಗಟ್ಟೆ ಅಧಿಕಾರಿ, 952 ಡಿ ದರ್ಜೆಯ ನೌಕರರು, 1367 ಭಧ್ರತಾ ಸಿಬ್ಬಂದಿ, 206 ಮೈಕ್ರೊ ವೀಕ್ಷಕರು) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಾಲ್ಕು ಕ್ಷೇತ್ರಗಳ ಒಟ್ಟು 865 ಮತ ಗಟ್ಟೆಗಳಿಗೆ 155 ಬಸ್, 21 ಮಿನಿ ಬಸ್, 47 ಟೆಂಪೊ ಟ್ರಾವೆಲರ್, 13 ಜೀಪುಗಳಲ್ಲಿ ತೆರಳಿದರು.
ಬೆಳಗ್ಗೆ ಅಧಿಕಾರಿ/ಸಿಬ್ಬಂದಿಗಳು ತಮಗೆ ಸೂಚಿಸಿದ ವಿಧಾನಸಭಾ ಕ್ಷೆತ್ರದ ಮಸ್ಟರಿಂಗ್ ಕೇಂದ್ರಗಳಲ್ಲಿ ಹಾಜರಾಗಿದ್ದು, ಅಲ್ಲಿ 15-19 ಮತಗಟ್ಟೆ ವ್ಯಾಪ್ತಿಗೆ ಒಳಪಡುವ ಸೆಕ್ಟರ್ ಅಧಿಕಾರಿಗಳಿಗೆ ಪ್ರತ್ಯೇಕ ಕೋಣೆಗಳನ್ನು ಒದಗಿಸಲಾಯಿತು. ಆ ಮತಗಟ್ಟೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ವಿದ್ಯುನ್ಮಾನ ಮತ ಯಂತ್ರ, ಎಲ್ಲ ರೀತಿಯ ನಮೂನೆ, ಲಕೋಟೆ, ವೈದ್ಯಕೀಯ ಕಿಟ್ಗಳನ್ನು ವಿತರಿಸ ಲಾಯಿತು. ಮಧ್ಯಾಹ್ನದ ಬೋಜನ ಸ್ವೀಕರಿಸಿದ ಸಿಬ್ಬಂದಿಗಳು ಮತಯಂತ್ರ ಗಳೊಂದಿಗೆ ತಮ್ಮ ಮಾರ್ಗದ ವಾಹನಗಳ ಮೂಲಕ ಹೊರಟರು.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈಂಟ್ ಸಿಸಿಲಿ ಮಸ್ಟರಿಂಗ್ ಕೇಂದ್ರ ದಿಂದ 1325 ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ತಮಗೆ ನಿಗದಿಪಡಿ ಸಿದ 226 ಮತಗಟ್ಟೆಗಳಿಗೆ ತೆರಳಿದರು. ಅದಕ್ಕಾಗಿ 42 ಬಸ್ಗಳು, 10 ಮ್ಯಾಕ್ಸಿ ಕ್ಯಾಬ್, ನಾಲ್ಕು ಜೀಪು, 7 ಮಿನಿಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಈ ವಾಹನಗಳು ಒಟ್ಟು 56 ಮಾರ್ಗಗಳಲ್ಲಿ ಸಂಚರಿಸಿ ಅಧಿಕಾರಿ, ಸಿಬ್ಬಂದಿಗಳನ್ನು ಆಯಾ ಮತಗಟ್ಟೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದವು.
ಉಡುಪಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ತಾಪಂ ಕಾರ್ಯನಿವಹರ್ಣಾಧಿಕಾರಿ ರಾಜು ಉಪಸ್ಥಿತರಿದ್ದರು.