ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮತದಾನಕ್ಕೆ ಕ್ಷಣಗಣನೆ
ಉಡುಪಿ, ಎ.17: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬದಲ್ಲಿ ಗುರುವಾರ ಈ ಕ್ಷೇತ್ರದಿಂದ 12 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಇದರಲ್ಲಿ ಭಾಗವಹಿಸಲು ಕ್ಷೇತ್ರದ 15.13 ಲಕ್ಷ ಮತದಾರರು ಸಂಭ್ರಮದಿಂದ ಸಿದ್ಧರಾಗಿದ್ದರೆ, ಅಭ್ಯರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿೆ ತಳಮಳ ಪ್ರಾರಂಭಗೊಂಡಂತಿದೆ.
ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ಆರು ಗಂಟೆಗೆ ತೆರೆಬಿದ್ದಿದೆ. ಕೊನೆಯ ಕ್ಷಣದ ಪ್ರಯತ್ನವಾಗಿ ಅಭ್ಯರ್ಥಿಗಳು, ಪಕ್ಷಗಳ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಬುಧವಾರ ಇಡೀ ದಿನ ಮನೆಮನೆಗೆ ತೆರಳಿ ಮತಯಾಚನೆಯೊಂದಿಗೆ ಮತದಾರರ ಮನಸ್ಸನ್ನು ಗೆಲ್ಲುವ ‘ಕೊನೆಯ’ ಪ್ರಯತ್ನ ನಡೆಸುತಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 12 ಮಂದಿ ಅಭ್ಯರ್ಥಿ ಗಳು ಸ್ಪರ್ಧಾ ಕಣದಲ್ಲಿದ್ದರೂ, ನಿಜವಾದ ಸ್ಪರ್ಧೆ ನಡೆಯುತ್ತಿರುವುದು ಹಾಲಿ ಸಂಸದೆ ಹಾಗೂ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನಡುವೆ. ಇಬ್ಬರು ಇಂದು ಸಹ ಮತದಾರರ ಮನ ಗೆಲ್ಲುವ ಕೊನೆಯ ಕ್ಷಣದ ಪ್ರಯತ್ನ ನಡೆಸಿದ್ದಾರೆ.
ಮತದಾನ ಗುರುವಾರ ಬೆಳಗ್ಗೆ 7ಗಂಟೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ 865 ಮತಗಟ್ಟೆಗಳಲ್ಲಿ ಪ್ರಾರಂಭಗೊಂಡು ಸಂಜೆ 6 ಗಂಟೆಯವರೆಗೆ ಮುಂದು ವರಿಯಲಿದೆ. ಆರು ಗಂಟೆಗೆ ಮುನ್ನ ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತವರಿಗೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮತದಾನ ಪ್ರಾರಂಭಕ್ಕೆ ಒಂದು ಗಂಟೆ ಮುನ್ನ ಅಂದರೆ ಬೆಳಗ್ಗೆ 6 ರಿಂದ ಪ್ರತಿ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಏಜೆಂಟರುಗಳ ಸಮ್ಮುಖದಲ್ಲಿ ಕಡ್ಡಾಯ ಅಣಕ ಮತದಾನ ನಡೆಯಲಿದೆ. ಇದರಲ್ಲಿ ಕನಿಷ್ಠ 50 ಮತಗಳನ್ನು ಹಾಕಿ ಮತಯಂತ್ರಗಳ ಕಾರ್ಯತತ್ಪರತೆಯನ್ನು ಪರಿಶೀಲಿಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಮೊಬೈಲ್ಗೆ ಅವಕಾಶವಿಲ್ಲ: ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿ ಗಳನ್ನು ಹೊರತು ಪಡಿಸಿ ಉಳಿದ ಯಾರಿಗೂ ಮತಗಟ್ಟೆ 100ಮೀ. ಅಂತರದಲ್ಲಿ ಹಾಗೂ ಮತಗಟ್ಟೆ ಒಳಗೆ ಮೊಬೈಲ್ ಒಯ್ಯಲು ಅವಕಾಶವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದ ಜಿಲ್ಲಾ ಸ್ವೀಪ್ ಸಮಿತಿ ಈ ಬಾರಿ ಮತದಾರರ ಜಾಗೃತಿಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿರುವುದರಿಂದ ಈ ಬಾರಿ ಮತದಾನದ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆಯನ್ನು ಜಿಲ್ಲಾಡಳಿತ ಹೊಂದಿದೆ.
ಹಿಂದಿನ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಅಬ್ಬರದ ಪ್ರಚಾರ ಕಂಡುಬಂದಿಲ್ಲ. ಪ್ರಧಾನಿ ಸೇರಿದಂತೆ ಯಾವುದೇ ಕೇಂದ್ರ ಸಚಿವರು ಈ ಬಾರಿ ಉಡುಪಿ ಜಿಲ್ಲೆಗೆ ಪ್ರಚಾರಕ್ಕೆ ಆಗಮಿಸಿಲ್ಲ. ಅದೇ ರೀತಿ ಮೈತ್ರಿ ಪಕ್ಷ ದಿಂದಲೂ ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈಬಾರಿ ಜಿಲ್ಲೆಗೆ ಆಗಮಿಸಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಹೀಗಾಗಿ ಎರಡೂ ಪಕ್ಷಗಳು ಸಣ್ಣ ಸಣ್ಣ ಸಭೆ, ಪಾದಯಾತ್ರೆಗಳಿಗೆ ಮಾತ್ರ ಸೀಮಿತವಾಗಿ ಪ್ರಚಾರ ನಡೆಸಿ ಜನರನ್ನು ನೇರವಾಗಿ ತಲುಪಲು ಪ್ರಯತ್ನಿಸಿದ್ದರು. ಇದು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬುದು ನಾಳೆ ಸಂಜೆ ಇವಿಎಂ ಯಂತ್ರದೊಳಗೆ ದಾಖಲಾಗಿ ಮೇ 23ಕ್ಕೆ ಬಹಿರಂಗಗೊಳ್ಳಲಿದೆ. ಅಲ್ಲಿಯವರೆಗೆ ಜನಮತಾಭಿಪ್ರಾಯ ಕುರಿತು ಅಭ್ಯರ್ಥಿಗಳು ಹಾಗೂ ಪಕ್ಷಗಳು ಕೂಡಿಸಿ ಕಳೆಯುವ ಲೆಕ್ಕಾಚಾರಗಳಲ್ಲೇ ಕಾಲಕಳೆಯಬೇಕಿದೆ.
ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮಾಹಿತಿ. (ಆವರಣದಲ್ಲಿ ಅವರ ಚಿಹ್ನೆ)
1.ಪಿ.ಪರಮೇಶ್ವರ, ಬಹುಜನ ಸಮಾಜ ಪಾರ್ಟಿ (ಆನೆ),
2.ಪ್ರಮೋದ್ ಮಧ್ವರಾಜ್, ಜಾತ್ಯತೀತ ಜನತಾದಳ (ತಲೆ ಮೇಲೆ ತೆನೆ ಹೊತ್ತ ಮಹಿಳೆ),
3.ಶೋಭಾ ಕರಂದ್ಲಾಜೆ, ಬಿಜೆಪಿ (ಕಮಲ),
4.ಪಿ.ಗೌತಮ್ ಪ್ರಭು, ಶಿವಸೇನೆ (ಬಿಲ್ಲು ಮತ್ತು ಬಾಣ),
5.ಎಂ.ಕೆ.ದಯಾನಂದ, ಪ್ರೌಟಿಸ್ಟ್ ಸರ್ವ ಸಮಾಜ (ಟ್ರಾಕ್ಟರ್ ಓಡಿಸುವ ರೈತ),
6. ವಿಜಯಕುಮಾರ್, ಸಿಪಿಐ(ಎಂಎಲ್) ರೆಡ್ಸ್ಟಾರ್ (ಗರಗಸ).
7.ಶೇಖರ ಹಾವಂಜೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ (ಕಪ್ ಮತ್ತು ಸಾಸರ್),
8. ಸುರೇಶ್ ಕುಂದರ್, ಉತ್ತಮ ಪ್ರಜಾಕೀಯ ಪಾರ್ಟಿ (ಅಟೋ-ರಿಕ್ಷಾ),
9.ಅಬ್ದುಲ್ ರೆಹಮಾನ್, ಪಕ್ಷೇತರ (ಕಬ್ಬು ರೈತ),
10.ಅಮೃತ್ ಶೆಣೈ ಪಿ., ಪಕ್ಷೇತರ (ವಜ್ರ),
11. ಮಗ್ಗಲಮಕ್ಕಿ ಗಣೇಶ್, ಪಕ್ಷೇತರ (ಸೀಟಿ-ವ್ಹಿಸಲ್),
12.ಕೆ.ಸಿ.ಪ್ರಕಾಶ್,ಪಕ್ಷೇತರ (ಗ್ಯಾಸ್ ಸಿಲಿಂಡರ್)