ಲೋಕಸಭಾ ಚುನಾವಣೆಗೆ ದ.ಕ. ಸಜ್ಜು: ಅಧಿಕಾರಿ-ಸಿಬ್ಬಂದಿಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ
ಅಕ್ಷರ ದಾಸೋಹ ಸಿಬ್ಬಂದಿಗಳಿಂದ ಊಟೋಪಚಾರ
ಮಂಗಳೂರು, ಎ.17: ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗೆ ದ.ಕ.ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು 8,920 ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ.
ಬುಧವಾರ ನಡೆದ ಮಸ್ಟರಿಂಗ್ನಲ್ಲಿ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಾಮಗ್ರಿಗಳಾದ ಇವಿಎಂ, ವಿವಿಪ್ಯಾಟ್ ಗಳ ಜೊತೆಗೆ ನಮೂನೆಗಳನ್ನು ಹಾಗೂ ಲಕೋಟೆಗಳೊಂದಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬಸ್ ಗಳಲ್ಲಿ ಮತಗಟ್ಟೆಗಳಿಗೆ ತೆರಳಿದ್ದಾರೆ.
ಚುನಾವಣಾ ಕರ್ತವ್ಯಕ್ಕಾಗಿ 668 ಬಸ್ಗಳಲ್ಲಿ ಸಿಬ್ಬಂದಿ ವರ್ಗವು ತಮಗೆ ನಿಗದಿಪಡಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲಿದ್ದು, ಅಂತಿಮ ಹಂತದ ಸಿದ್ದತೆಗಳು ನಡೆಯಿತು. 2,230 ಪಿಆರ್ಒಗಳು, 2,230 ಎಪಿಆರ್ಒಗಳು, 590 ರೂಟ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅವರವರ ಕರ್ತವ್ಯ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆಗಳಾಗಿವೆ.
15ರಿಂದ 20 ಮತಗಟ್ಟೆಗಳಿಗೆ ಒಬ್ಬರು ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಇವರು ಮತಗಟ್ಟೆ ಸಿಬ್ಬಂದಿಗಳ ತಲುಪುವಿಕೆ, ಸುರಕ್ಷತೆ ಹಾಗೂ ಇವರಿಗೆ ಮೂಲಭೂತ ಸೌಕರ್ಯ, ಮೇಲ್ವಿಚಾರಣೆ ಮಾಡುವುದರೊಂದಿಗೆ ಬುಧವಾರದಿಂದ ಮತದಾನ ಅಂತಿಮಗೊಳ್ಳುವವರೆಗೆ ಅವರ ವ್ಯಾಪ್ತಿಯ ಮತಗಟ್ಟೆಗಳಲ್ಲಿನ ಎಲ್ಲ ಸಂಬಂಧಿತ ಪ್ರಕ್ರಿಯೆಗಳ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ನಿರತ ಸಿಬ್ಬಂದಿ ವರ್ಗಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತನ್ನು ನೀಡಲಾಗಿದೆ. ವಿಶೇಷವಾಗಿ ಅಕ್ಷರ ದಾಸೋಹ ಸಿಬ್ಬಂದಿಗಳಿಂದ ಊಟೋಪಚಾರದ ವ್ಯವಸ್ಥೆಗಳನ್ನು ಮಾಡಲಾಗಿದ್ದು ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮತ್ತು ಅಲ್ಲಿರುವ ಪೊಲೀಸ್ ಸಿಬ್ಬಂದಿಗಳ ಸೌಕರ್ಯಕ್ಕೆ ವೆಲ್ಪೇರ್ ಕಿಟ್ಗಳನ್ನು ಒದಗಿಸಲಾಗಿದೆ. ಈ ಕಿಟ್ಗಳಲ್ಲಿ ಟೂತ್ಪೇಸ್ಟ್, ಸಾಬೂನು, ತೆಂಗಿನ ಎಣ್ಣೆ, ಸೊಳ್ಳೆ ನಿವಾರಕ ಬತ್ತಿ, ಬಾಚಣಿಕೆ, ಬೆಂಕಿಪೊಟ್ಟಣದ ಜೊತೆಗೆ ಜ್ವರದ ಮಾತ್ರೆ, ಒಆರ್ಎಸ್, ಬ್ಯಾಂಡೇಜ್, ಗೇಜ್ ಪ್ಯಾಡ್, ಅಯೋಡಿನ್ ಆಯಿಂಟ್ಮೆಂಟ್ ಕೈಗವಸುಗಳನ್ನು ಒಳಗೊಂಡಿದೆ.
ಮತದಾನ ದಿನದಂದು ಎಲ್ಲ 1,861 ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿವರಣೆ ಪಡೆಯಲು ಜಿಲ್ಲಾ ನಿಯಂತ್ರಣ ಕೊಠಡಿ ಯಲ್ಲಿ ಮಾಹಿತಿ ಸಂಪರ್ಕ ನೆಟ್ವರ್ಕ್ನ್ನು ಜಿಪಿಎಸ್ ಮುಖಾಂತರ ಕಲ್ಪಿಸಲಾಗಿದ್ದು, 110 ಮತಗಟ್ಟೆಗಳಿಂದ ನೇರವಾಗಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. 300 ಮೈಕ್ರೊ ಅಬ್ಸರ್ವರ್ಸ್ಗಳನ್ನು ನೇಮಿಸಲಾಗಿದೆ.
ಮತಗಟ್ಟೆಗಳಿಂದ ಸಿಬ್ಬಂದಿಯೊಂದಿಗೆ ಪ್ರತೀ ಮಾರ್ಗದಲ್ಲಿ ತೆರಳುವ ವಾಹನಗಳ ಮೇಲೆ ಕೇಂದ್ರ ನಿಯಂತ್ರಣ ಕೊಠಡಿಯಿಂದ ಗಮನಿಸಲಾಗುತ್ತದೆ. ಎಂತಹ ಸಂದಿಗ್ಧ ಪರಿಸ್ಥಿತಿ ಬಂದರೂ ನಿಭಾಯಿಸಲು, ಸಮಸ್ಯೆ ಎದುರಾದ ಮತಗಟ್ಟೆಗಳನ್ನು ಐದು ನಿಮಿಷಗಳೊಳಗೆ ತಲುಪಿಸಲು ವ್ಯವಸ್ಥೆಯನ್ನು ಮಾಡಲಾಗಿದೆ.
ಜಿಲ್ಲೆಯಲ್ಲಿ ಸಖಿ ಮತಗಟ್ಟೆ, ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆಗಳು, ಪಾರಂಪರಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾರಂಪರಿಕ ಮತಗಟ್ಟೆಗಳು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರು ಉತ್ತರದ ಸುರತ್ಕಲ್ ಸಮೀಪದ ಮದ್ಯದ ಕೇಂದ್ರೀಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್, ಬಂಟ್ವಾಳದ ಕನ್ಯಾನ ಬಳ್ನಾಡ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದ ಬಡಡ್ಕದ ಶ್ರೀರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿವೆ.
ಬೆಳ್ತಂಗಡಿಯ ಉಪ್ಪಾರಪಲ್ಕೆಯ ದ.ಕ.ಜಿಪಂ ಹಿಪ್ರಾ. ಶಾಲೆಯಲ್ಲಿ, ಕುತ್ತಾರ್ ಪದವು ದ.ಕ.ಹಿ.ಪ್ರಾ.ಶಾಲೆ, ನೆಕ್ಕಿಲಾಡಿಯ ದ.ಕ ಹಿ.ಪ್ರಾ. ಶಾಲೆಯಲ್ಲಿ ವಿಕಲಚೇತನ ಮತಗಟ್ಟೆಗಳನ್ನು ತೆರೆಯಲಾಗಿದೆ.
ಬೆಳ್ತಂಗಡಿಯ ದ.ಕ.ಜಿ.ಪಂ.ಮಾದರಿ ಹಿ.ಪ್ರಾ.ಶಾಲೆ, ಮೂಡುಬಿದಿರೆಯ ಪಂಚಾಯತ್ ಕಚೇರಿ, ಕುಳಾಯಿ ಚಿತ್ರಾಪುರದ ದ.ಕ.ಜಿ.ಪಂ ಮೀನುಗಾರಿಕಾ ಹಿಪ್ರಾ ಶಾಲೆ, ಸುರತ್ಕಲ್ನ ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪಣಂಬೂರಿನ ದ.ಕ.ಜಿ.ಪಂ ಹಿಪ್ರಾ ಶಾಲೆ, ಬೋಂದೆಲ್ನ ಮಹಿಳಾ ಪಾಲಿಟೆಕ್ನಿಕ್, ಸುರತ್ಕಲ್ ಶ್ರೀನಿವಾಸ ನಗರದ ಕೆಆರ್ಇಸಿ ಹಿಪ್ರಾ ಶಾಲೆ, ಲೇಡಿಹಿಲ್ ಹಿಪ್ರಾ ಶಾಲೆ, ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜು, ಕಂಕನಾಡಿ ಬೆಂದೂರ್ನ ಸಂತ ಜೋಸೆಫ್ ಹಿ.ಪ್ರಾ.ಶಾಲೆ, ಕಾರ್ಸ್ಟ್ರೀಟ್ನ ಸರಕಾರಿ ಮಹಿಳಾ ಕಾಲೇಜು, ಸೋಮೇಶ್ವರ ಉಚ್ಚಿಲದ ಭಗವತಿ ಹಿ.ಪ್ರಾ.ಶಾಲೆ, ವಿಶ್ವಮಂಗಳ ವಿದ್ಯಾಸಂಸ್ಥೆ ಹಿ.ಪ್ರಾ ಶಾಲೆ, ಹೋಲಿ ಏಜೆಂಲ್ ಹಿ.ಪ್ರಾ. ಶಾಲೆ ಪೆರ್ಮನ್ನೂರು, ಕೋಟೆಕಾರ್ ಪಟ್ಟಣ ಪಂಚಾಯತ್ ಕಚೇರಿ, ಸ್ಟೆಲ್ಲಾಮೇರಿಸ್ ಹಿ.ಪ್ರಾ ಶಾಲೆ ಸೋಮೇಶ್ವರ, ಬಂಟ್ವಾಳ ಲೊರೆಟ್ಟೋ ಅಮ್ಟಾಡಿಯ ಹಿ.ಪ್ರಾ. ಶಾಲೆ, ಪುತ್ತೂರು ಕುಡ್ಡುಪದವು ಕೇಪು ಎಸ್ಟಿ ರೆಸಿಡೆನ್ಷಿಯಲ್ ಸ್ಕೂಲ್, ಕಡಬ ಮಾದರಿ ಹಿ.ಪ್ರಾ. ಶಾಲೆ ಕಡಬ ಹೀಗೆ 20 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಎಫ್ಎಸ್ಟಿ ತಂಡಗಳು ಮತದಾನ ಪ್ರಕ್ರಿಯೆಯನ್ನು ನ್ಯಾಯ ಹಾಗೂ ಮುಕ್ತವಾಗಿ ನಡೆಸಲು ಸರ್ವಸನ್ನದ್ಧವಾಗಿದ್ದು ಮತದಾನ ಪ್ರಕ್ರಿಯೆಯನ್ನು ಅವ್ಯವಸ್ಥಿತವಾಗಿಸಲು ಅವಕಾಶ ನೀಡಲಾಗುವುದಿಲ್ಲ. ಈಗಾಗಲೇ ಸದಾಚಾರ ಸಂಹಿತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಮಾಧ್ಯಮಗಳ ಮೂಲಕ ನೀಡಲಾಗಿದ್ದು, ನಿಷೇಧಾಜ್ಞೆಯನ್ನು ಹೇರಲಾಗಿದೆ. ಮತದಾನಕ್ಕೆ ಅನುಕೂಲವಾಗುವಂತೆ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲರಿಗೂ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಮತಗಟ್ಟೆಗಳಲ್ಲಿ ಪಿಆರ್ಒ ಗಳು ಸರ್ವೋಚ್ಛ ಅಧಿಕಾರಿಗಳಾಗಿದ್ದು ಅವರ ನಿರ್ಧಾರವೇ ಅಂತಿಮ. ಮೊಬೈಲ್ ಫೋನುಗಳನ್ನು ಮತಗಟ್ಟೆಗಳಲ್ಲಿ ಬಳಸುವಂತಿಲ್ಲ ಎಂದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.