ಸಿದ್ಧಕಟ್ಟೆ: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ
ಬಂಟ್ವಾಳ, ಎ. 17: ಮದುವೆ ತೋರಣ, ಅಕ್ಷತೆ ಅಲಂಕಾರ, ಸಿಹಿ ಭೋಜನ, ಗಟ್ಟಿ ಮೇಳದ ಸಂಭ್ರಮದ ನಡುವೆ ವಧು-ವರರು ಹಾಗೂ ಬಂಧು-ಬಳಗವು ಸಾಮಾಜಿಕ ಜಾಗೃತಿ ಮೂಡಿಸಿದೆ. ಬುಧವಾರದಂದು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಮಂಟಪವೊಂದರಲ್ಲಿ ನಡೆದ ಮದುವೆ ಸಮಾರಂಭವು ಮತದಾನ ಜಾಗೃತಿಯ ವೇದಿಕೆಯಾಯಿತು.
ಸಿದ್ಧಕಟ್ಟೆಯಲ್ಲಿರುವ ಹರ್ಷಲಿ ಸಭಾಭವನದಲ್ಲಿ ಇಂದು ನಡೆದ ಸಂತೋಷ್ ಬಂಗೇರ ಮತ್ತು ಪ್ರಮೀಳಾ ಮದುವೆ ಸಮಾರಂಭದಲ್ಲಿ ವಧು-ವರರು "ಕಡ್ಡಾಯ ಮತದಾನ ಮಾಡಿ" ಎಂಬ ಬಿತ್ತಿಪತ್ರವನ್ನು ಹಿಡಿದು ಜಾಗೃತಿ ಮೂಡಿಸಿದ್ದಾರೆ. "ನೀವು ನಮ್ಮನ್ನು ಹರಸಿ, ಹಾರೈಸುವ ರೀತಿಯಲ್ಲಿ ನಾಳೆ ನಡೆಯುವ ಚುನಾವಣೆಯಲ್ಲಿ ದೇಶಕ್ಕಾಗಿ ಮತದಾನ ಮಾಡಬೇಕು" ಎಂಬ ಬಿತ್ತಿಪತ್ರವು ಸಮಾರಂಭದಲ್ಲಿ ಭಾಗವಹಿಸಿದ್ದ ಜನರ ಗಮನ ಸೆಳೆದಿದೆ.
ವಿವಾಹ ಮಹೋತ್ಸವದಲ್ಲಿ ಭಾಗಿಗಳಾದ ನೂರಾರು ಬಂಧುಗಳಿಗೆ ಆಶ್ಚರ್ಯ ಎನಿಸಿದರೂ ಉತ್ತಮ ಸಂದೇಶ ಅದರಲ್ಲಿತ್ತು. ಬೀಗರು ಬಂಧುಗಳು ಗಟ್ಟಿಮೇಳದ ಸಂಭ್ರಮ, ಸಿಹಿತಿನಿಸುಗಳ ಮಧ್ಯೆಯು ನವದಂಪತಿಯು ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರರಾದರು.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಅದೇ ರೀತಿ ಜನರು ಹೆಚ್ಚಾಗಿ ಸೇರುವ ಖಾಸಗಿ ಕಾರ್ಯಕ್ರಮದಲ್ಲೂ ನಡೆದರೆ ಇನ್ನೂ ಹೆಚ್ಚಿನ ಜನರಿಗೆ ಚುನಾವಣೆಯ ಮಹತ್ವ ತಿಳಿಯಲು ಸಾಧ್ಯ ಎಂಬುವುದು ವಧು-ವರರ ಅಭಿಪ್ರಾಯ.