ನೀತಿಸಂಹಿತೆ ಉಲ್ಲಂಘಿಸಿದ ಆರೋಪ: ಹರೀಶ್ಕುಮಾರ್, ಐವನ್ ಡಿಸೋಜ ವಿರುದ್ಧ ದೂರು
ಮಂಗಳೂರು, ಎ.17: ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಿಥ್ಯಾರೋಪದ ಪುಸ್ತಕಗಳನ್ನು ಚುನಾವಣಾ ನೀತಿಸಂಹಿತೆಗೆ ವಿರುದ್ಧವಾಗಿ ಮುದ್ರಿಸಿ ಹಂಚಿದ ಆರೋಪದಲ್ಲಿ ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ದ.ಕ. ಬಿಜೆಪಿ ಕಾನೂನು ಘಟಕ ಚುನಾವಣಾಧಿಕಾರಿಗೆ ಬುಧವಾರ ದೂರು ನೀಡಿದೆ.
ಈ ಕಾಂಗ್ರೆಸ್ ಮುಖಂಡರು ಆಗಸ್ಟಾ ವೆಸ್ಟ್ಲ್ಯಾಂಡ್ ವಂಚನೆ ಕೇಸಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಿ ಅಪಪ್ರಚಾರ ನಡೆಸುತ್ತಿ ದ್ದಾರೆ. ಅಲ್ಲದೆ, ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರೋಪಿಯನ್ನಾಗಿ ಹೆಸರಿಸಿ ವಿವರಗಳುಳ್ಳ ಪುಸ್ತಕವನ್ನು ನೀತಿಸಂಹಿತೆಗೆ ವಿರುದ್ಧವಾಗಿ ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ಗೆ ದೂರು ಸಲ್ಲಿಸಿದ ನಿಯೋಗದಲ್ಲಿ ನ್ಯಾಯವಾದಿಗಳಾದ ಸುಧಾಕರ ಜೋಶಿ, ಸಂತೋಷ್ ನಾಯಕ್ ಹಾಗೂ ಪುರಂದರ ಶೆಟ್ಟಿ ಇದ್ದರು.