ಬಲಿಷ್ಠ, ಅಭಿವೃದ್ಧಿಶೀಲ ಭಾರತಕ್ಕಾಗಿ ಮತದಾನ ಮಾಡುವಂತೆ ಪೇಜಾವರ ಸ್ವಾಮೀಜಿ ಕರೆ
ಉಡುಪಿ, ಎ.18: ಉಡುಪಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉಡುಪಿ ನಾರ್ತ್ ಶಾಲೆಯ ಮತಗಟ್ಟೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಮತದಾನ ಪ್ರತಿಯೊಬ್ಬರ ಕರ್ತವ್ಯ. ಮತದಾನ ಮಾಡದಿದ್ದರೆ ನಾವು ಕರ್ತವ್ಯ ಭ್ರಷ್ಟರಾಗುತ್ತೇವೆ. ಅಲ್ಲದೆ ಸರಕಾರ ವನ್ನು ಟೀಕಿಸುವ ಅಧಿಕಾರವೇ ನಮಗೆ ಇರುವುದಿಲ್ಲ. ಆದುದರಿಂದ ಎಲ್ಲರು ಮತದಾನ ಮಾಡಬೇಕು. ಯಾವುದೇ ಪಕ್ಷ ಇರಲಿ ವಿಚಾರ ಮಾಡಿ ದೇಶದ ಹಿತ ದೃಷ್ಠಿಯಿಂದ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಭಾರತ ರಾಷ್ಟ್ರದ ಪ್ರಜೆಯಾದ ನಾನು ಹೆಮ್ಮೆಯಿಂದ ಇಂದು ಮತ ಚಲಾಯಿಸಿದ್ದೇನೆ. ಉತ್ತಮ ಸರಕಾರ ಬರಬೇಕೆಂಬ ಕಳಕಳಿಯಲ್ಲಿ ಎಲ್ಲರು ಮತ ದಾನ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ನಿಂದನೆ ಸರಿಯಲ್ಲ. ಚುನಾವಣಾ ಪ್ರಚಾರ ಅತ್ಯಂತ ಕೆಳಮಟ್ಟಕ್ಕೆ ಇಳಿದಿರುವುದು ವಿಷಾಧನೀಯ. ವೈಯಕ್ತಿಕ ನಿಂದನೆಯಿಂದ ಏನು ಪ್ರಯೋಜನ ಇಲ್ಲ. ಇದರಿಂದ ಎದುರಾಳಿಗೆ ಅನುಕಂಪ ದೊರೆಯುತ್ತದೆ ಎಂದರು.
ಚುನಾವಣೆಯ ಸಭ್ಯತೆಯಿಂದ ಚುನಾವಣೆ ನಡೆಯಬೇಕು. ಬಲಿಷ್ಠವಾದ, ಅಭಿವೃದ್ಧಿ ಶೀಲ ಭಾರತ ಆಗಬೇಕು. ಕೃಷಿ, ಉದ್ಯಮ, ನಿರುದ್ಯೋಗ ಸಮಸ್ಯೆ ಪರಿಹಾರ ಆಗಬೇಕು. ದೇಶ ಶಕ್ತಿಶಾಲಿಯಾಗಬೇಕು. ಯಾವ ಸರಕಾರದ ಬಗ್ಗೆಯೂ ನಾನು ಹೊಗಳಿಕೆ ತೆಗಳಿಕೆ ಮಾಡುವುದಿಲ್ಲ. ವಿಚಾರ ಮಾಡಿ ಮತ ದಾನ ಮಾಡಬೇಕು ಎಂದು ಅವರು ತಿಳಿಸಿದರು.