ಉಡುಪಿ: ಆಸ್ಕರ್, ಪ್ರಮೋದ್, ಕೋಟ, ರಘುಪತಿ ಭಟ್ ಸಹಿತ ಗಣ್ಯರಿಂದ ಮತದಾನ
ಉಡುಪಿ, ಎ.18: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಗಳು, ಶಾಸಕರು, ಅಭ್ಯರ್ಥಿಗಳು ಹಾಗೂ ಗಣ್ಯರು ಉಡುಪಿ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ತಮ್ಮ ಮದಾನದ ಹಕ್ಕನ್ನು ಚಲಾಯಿಸಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ತನ್ನ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಜೊತೆ ಉಡುಪಿ ಅಜ್ಜರಕಾಡಿನಲ್ಲಿರುವ ವಿವೇಕಾನಂದ ಸರಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಬೇರೆ ರಾಜ್ಯ, ದೇಶವನ್ನು ನೋಡಿದಾಗ ನಮ್ಮಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಸಂವಿಧಾನದ ರಕ್ಷಣೆ ಆಗಿದೆ. ಇದು ಮುಂದೆಯೂ ಮುಂದುವರಿದುಕೊಂಡು ಹೋಗಬೇಕು ಎಂದರು.
ವಿದ್ಯುನ್ಮಾನ ಮತಯಂತ್ರದ ಬಳಕೆ ವಿಚಾರ ಇದೀಗ ಚರ್ಚೆಯ ಹಂತದಲ್ಲಿದೆ. ಕೆಲವೆಡೆ ಇವಿಎಂನಲ್ಲಿ ದೋಷಗಳಿರುವ ಹಾಗೂ ಇನ್ನು ಹಲವೆಡೆ ವಿವಿಪ್ಯಾಟ್ ಬಗ್ಗೆ ದೂರುಗಳಿವೆ. ಮತದಾರ ಚಲಾಯಿಸಿದ ಮತ ವಿವಿಪ್ಯಾಟ್ನಲ್ಲಿ ಕಾಣಿಸದ ಉದಾಹರಣೆಯೂ ಇದೆ. ಈ ವಿಚಾರ ಸುಪ್ರೀಂ ಕೋರ್ಟಿ ಮೆಟ್ಟಿಲೇರಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದುನೋಡೇಕಾಗಿದೆ ಎಂದು ಅವರು ತಿಳಿಸಿದರು.
ಮಲ್ಪೆಯಲ್ಲಿ ಪ್ರಮೋದ್ ಮತದಾನ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ತಾಯಿ ಮಾಜಿ ಸಚಿವೆ ಮನೋರಮಾ ಮಧ್ವರಾಜ್, ಪತ್ನಿ ಸುಪ್ರಿಯಾ ಮಧ್ವರಾಜ್, ಅಕ್ಕ ಬಬಿತಾ ಮಧ್ವರಾಜ್ ಜೊತೆ ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ನಾನು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ದಾಗ ಮೊದಲು ಅಪಸ್ವರವಿತ್ತು. ಆದರೆ ಈಗ ಅದು ಒಳ್ಳೆಯ ನಿರ್ಧಾರ ಎಂಬ ಭಾವನೆ ಕಾರ್ಯಕರ್ತರಲ್ಲಿ ಬಂದಿದೆ. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಫೀಲ್ಡ್ ವರ್ಕ್ ಆಗಿದೆ ಎಂದು ಹೇಳಿದರು.
ಮೋದಿ ಹೆಸರಿನಲ್ಲಿ ಕೆಟ್ಟ ಜನಪ್ರತಿನಿಧಿ ಆಯ್ಕೆ ನಮಗೆ ನಷ್ಟ ಎಂದು ಜನರಿಗೆ ಮನವರಿಕೆಯಾಗಿದೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಬೇಡ ಎಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ. ಚಿಹ್ನೆ ಬಗ್ಗೆ ಮತದಾರರಿಗೆ ಕಾರ್ಯಕರ್ತರು ಮನದಟ್ಟು ಮಾಡಿದ್ದಾರೆ. ಮೈತ್ರಿ ಧರ್ಮದಲ್ಲಿ ಚೆಹ್ನೆ ಮುಖ್ಯವಲ್ಲ. ಜಾತ್ಯತೀತ ಶಕ್ತಿಗಳು ಒಂದುಗೂಡುವುದು ಮುಖ್ಯ. ನನ್ನ ಎದುರಾಳಿ ಶೋಭಾ ಕರಂದ್ಲಾಜೆಗೆ ಕ್ಷೇತ್ರದಲ್ಲಿ ಮತದಾನ ಮಾಡುವ ಅವಕಾಶ ಇಲ್ಲ. ಶೋಭನಿಗೆ ಶೋಭ ಮತವೇ ಬೀಳುವುದಿಲ್ಲ ಎಂದರು.
ಕಾದು ನಿಂತು ಕೋಟ ಮತದಾನ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಗ್ರಾಪಂನ 165ನೆ ಮತಗಟ್ಟೆಯಲ್ಲಿ ಸುಮಾರು 45 ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ನಿಟ್ಟೂರು ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಕುಟುಂಬದ ಜೊತೆ ಆಗಮಿಸಿ ಮತದಾನ ಮಾಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಕಾಪು ಪಡು ಜಿಪಂ ಶಾಲೆಯ ಮತಗಟ್ಟೆಯಲ್ಲಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿ ಸರಕಾರಿ ಶಾಲಾ ಮತಗಟ್ಟೆಯಲ್ಲಿ, ಕಾರ್ಕಳ ಶಾಸಕ ಸುನೀಲ್ ಕುಮಾರ್ ನಿಟ್ಟೆ ಗ್ರಾಮದ ಕನ್ನಂಬಾಡಿ ಪದವು ಶಾಲೆಯ ಮಗಟ್ಟೆ ಯಲ್ಲಿ ಮತ ಚಲಾಯಿಸಿದರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ನಗರದ ವಳಕಾಡು ಶಾಲೆಯಲ್ಲಿರುವ ಮತಗಟ್ಟೆಗೆ ತನ್ನ ತಾಯಿ 80 ವರ್ಷದ ಸತ್ಯವತಿ ಶೆಣೈ, ಪತ್ನಿ ಸವಿತಾ ಶೆಣೈ ಜೊತೆ ತೆರಳಿ ಮತದಾನದ ಹಕ್ಕನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ತಮ್ಮ ಬೆರಳಿಗೂ ಶಾಹಿ ಹಾಕುವಂತೆ ಅವರ ಮಕ್ಕಳು ಹಠ ಹಿಡಿದರು. ನಂತರ ಮತಗಟ್ಟೆ ಅಧಿಕಾರಿಗಳು ಕಿರು ಬೆರಳುಗಳಿಗೆ ಹಾಕಿದ ಶಾಹಿಯಿಂದ ಮಕ್ಕಳು ಖುಷಿ ಪಟ್ಟರು.
ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅಜ್ಜರಕಾಡು ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಹಾಗೂ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಟಿ.ಎ.ಪೈ ಮೋಡರ್ನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದಾನದ ಹಕ್ಕನ್ನು ಚಲಾಯಿಸಿದರು.