ಪಡುಬಿದ್ರಿ: ಗುಜರಿ ಅಂಗಡಿ ಬೆಂಕಿಗಾಹುತಿ; ಲಕ್ಷಾಂತರ ರೂ. ನಷ್ಟ
ಪಡುಬಿದ್ರಿ: ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕಲ್ಸಂಕ ಬಳಿ ಇರುವ ಗುಜರಿ ಅಂಗಡಿಯೊಂದಕ್ಕೆ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಇಲ್ಲಿನ ಎರ್ಮಾಳು ಕಲ್ಸಂಕ ಬೈಲಿಗೆ ಕಳೆದೆರಡು ದಿನಗಳ ಹಿಂದೆ ಬಿದ್ದ ಆಕಸ್ಮಿಕ ಬೆಂಕಿಯನ್ನು ಅಗ್ನಿಶಾಮಕ ದಳದ ಸಹಾಯದಿಂದ ಸ್ಥಳೀಯರು ನಂದಿಸಿ ದ್ದರು. ಅಂದು ಉಳಿದ ಸಣ್ಣನೆಯ ಕಿಡಿ ಮತ್ತೆ ಗುಂಡ್ಲಾಡಿ ಪ್ರದೇಶದ ಕಾಡಿಗೆ ಬುಧವಾರ ವ್ಯಾಪಿಸಿ ಸಾಕಷ್ಟು ಮರಗಿಡಗಳನ್ನು ನಾಶ ಮಾಡಿತ್ತು. ಸ್ಥಳೀಯರು ಸೇರಿ ಅದನ್ನೂ ನಂದಿಸಿದ್ದರು.
ಗುರುವಾರ ಬೆಳಿಗ್ಗೆಯಿಂದ ಮತ್ತೆ ಅಲ್ಲಿ ಉಳಿದಿದ್ದ ಬೆಂಕಿ ಕಿಡಿ ಗಾಳಿಯ ರಭಸಕ್ಕೆ ಹೊಗೆಯಾಡಲಾರಂಭಿಸಿ ಹೊತ್ತಿ ಉರಿದು ರಾಷ್ಟ್ರೀಯ ಹೆದ್ದಾರಿ ಪ್ರದೇಶಕ್ಕೆ ವ್ಯಾಪಿಸಿತು. ಈ ಪ್ರದೇಶದಲ್ಲಿ ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಗುಜರಿ ಅಂಗಡಿ ಸುತ್ತಮುತ್ತ ರಾಶಿ ಹಾಕಿದ್ದ ಪ್ಲಾಸ್ಟಿಕ್ ಸಹಿತ ಗುಜರಿ ವಸ್ತುಗಳಿಗೆ ವ್ಯಾಪಿಸಿ ಆಹುತಿ ತೆಗೆದುಕೊಂಡಿತು.
ಬೆಂಕಿ ಹಾಗೂ ದಟ್ಟ ಹೊಗೆಯಿಂದ ಈ ಪ್ರದೇಶದಲ್ಲಿ ಸಂಚಾರಕ್ಕೆ ತೊಡಕಾಯಿತು. ಈ ಸಂದರ್ಭ ಚುನಾವಣಾ ಕರ್ತವ್ಯದಲ್ಲಿದ್ದ ಕಾಪು ತಹಶೀಲ್ದಾರ್ ರಶ್ಮಿ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಹಾಗೂ ಯುಪಿಸಿಎಲ್ನ ಆಗ್ನಿಶಾಮಕ ವಾಹನವನ್ನು ಕರೆಯಿಸಿ ಬೆಂಕಿ ನಂದಿಸಲು ಸಹಕರಿಸಿದರು.