ಕುದುರೆಗುಂಡಿ: ಎ.19ರಿಂದ ಉರೂಸ್ ಕಾರ್ಯಕ್ರಮ
ಕೊಪ್ಪ, ಎ. 18: ಸ್ಥಳೀಯ ಬದ್ರಿಯಾ ಜುಮಾ ಮಸೀದಿಯ ಹಝ್ರತ್ ಸೈಯದ್ ಸಾದಾತ್ ಶರೀಫುಲ್ ಅವುಲಿಯಾ ಕುದುರೆಗುಂಡಿ ಅವರ ದರ್ಗಾ ಶರೀಫ್ 89ನೇ ವಾರ್ಷಿಕ ಉರೂಸ್ ಕಾರ್ಯಕ್ರಮವನ್ನು ಎ.19ರಿಂದ 21ರವರೆಗೆ ಆಯೋಜಿಸಲಾಗಿದೆ ಎಂದು ಮಸೀದಿಯ ಅಧ್ಯಕ್ಷ ಮೂಸಬ್ಬ ಬೆಮ್ಮನೆ ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎ.20ರಂದು ಕೀನ್ಯದ ಸೈಯದ್ ಅಲವಿ ನೇತೃತ್ವದಲ್ಲಿ ಕುತುಬಿಯ್ಯತ್ ದುಆ ಪ್ರಾರ್ಥನೆ ನಡೆಯಲಿದ್ದು, ಎ.21ರಂದು ಬೆಳಗ್ಗೆ 10ಕ್ಕೆ ಮಸೀದಿಯ ಗೌರವಾಧ್ಯಕ್ಷ ಅಬೂಬಕರ್ ಉರೂಸ್ ಉದ್ಘಾಟಿಸಲಿದ್ದಾರೆ. ಮಸೀದಿಯ ಖತೀಬ್ ಇಬ್ರಾಹೀಂ ಮದನಿ ದುಆ ನೆರವೇರಿಸಲಿದ್ದು, ಪುತ್ತೂರಿನ ಹೊಸಮಜಲಿನ ಅಕ್ತರ್ ಇಬ್ರಾಹೀಂ ಮುಸ್ಲಿಯಾರ್ ನೇತೃತ್ವದಲ್ಲಿ ಸಂದಲ್ ಮೆರವಣಿಗೆ, ಮತ ಪ್ರವಚನ ಮತ್ತು ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವನ್ನು ಖತೀಬ್ ಇಬ್ರಾಹೀಂ ಮದನಿ ಉದ್ಘಾಟಿಸಲಿದ್ದು, ಮಸೀದಿಯ ಅಧ್ಯಕ್ಷ ಮೂಸಬ್ಬ ಬೆಮ್ಮನೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಚಿಕ್ಕಮಗಳೂರಿನ ಅಲ್ -ಹಾಜಾಲಿಯಾ ಎಜುಕೇಶನ್ ಸೆಂಟರ್ನ ಚೇರ್ಮ್ಯಾನ್ ಎ.ಪಿ.ಸ್. ಹುಸೈನ್ ಅಹದಲ್ ತಂಙಳ್, ಉಪನ್ಯಾಸಕ ಅರವಿಂದ ಸೋಮಯಾಜಿ, ನರಸಿಂಹರಾಜಪುರದ ವಿಕಾರ್ ಸೈಂಟ್ ಮೇರೀಸ್ ಜೀವನಜ್ಯೋತಿ ಚರ್ಚ್ನ ಧರ್ಮಗುರು ಫಾದರ್ ಮೇತಿಜೋನ್ ಉಪನ್ಯಾಸ ನೀಡಲಿದ್ದಾರೆ. ಪುತ್ತೂರಿನ ಅನೀಸ್ ಕೌಸರಿ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಮತಪ್ರಸಂಗ ಮಾಡಲಿದ್ದಾರೆ. ಮಾಗುಂಡಿಯ ತ್ವೈಬಾ ಬುರ್ದಾ ಮಜ್ಲಿಸ್ ತಂಡದಿಂದ ಸುಮಧುರ ಬುರ್ದಾ ಮಜ್ಲೀಸ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಮಸೀದಿಯ ಸಮಿತಿ ಪದಾಧಿಕಾರಿ ಬಿ.ಮುಹಮ್ಮದ್, ಹುಸೈನ್, ಮುಹಮ್ಮದ್ ಹನೀಫ್, ಬದ್ರುದ್ದೀನ್, ಶಮೀಮ್, ಯು.ನವಾಝ್ ಮತ್ತಿತರರು ಹಾಜರಿದ್ದರು.