ಪಿಯುಸಿಯಲ್ಲಿ ರ್ಯಾಂಕ್: ಗೌಸಿಯಾ, ರಈಸಾರಿಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಸನ್ಮಾನ
ಉಡುಪಿ: ಪಿಯುಸಿಯಲ್ಲಿ ರ್ಯಾಂಕ್ ಪಡೆದ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ ಮುಹಮ್ಮದ್ ಗೌಸ್ ಅವರ ಪುತ್ರಿ ಗೌಸಿಯಾ ಹಾಗೂ ರಾಜ್ಯಕ್ಕೇ ಮೂರನೆ ರ್ಯಾಂಕ್ ಪಡೆದ ಹೆಬ್ರಿಯ ರಈಸಾರನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಿಗೆ ಸನ್ಮಾನ, ಸ್ಮರಣಿಕೆಯನ್ನು ನೀಡಿ ಗೌರವಿಸಿ, ಮುಂದಿನ ಶೈಕ್ಷಣಿಕ ಬದುಕಿನಲ್ಲಿ ಮತ್ತಷ್ಟು ಶ್ರೇಷ್ಠ ಸಾಧನೆಗಳಿಗಾಗಿ ಹಾರೈಸಲಾಯಿತು. ಕಾಲೇಜು ಬದುಕಿನಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ, ಮಾದರಿ ವಿದ್ಯಾರ್ಥಿಗಳಾಗುವಂತೆ, ಆ ಮೂಲಕ ಸಮುದಾಯಕ್ಕೆ ಒಳ್ಳೆಯ ಹೆಸರು ತರುವಂತೆ ಉಪದೇಶಿಸಲಾಯಿತು.
ಗೌಸಿಯಾರ ತಂದೆ ಮುಹಮ್ಮದ್ ಗೌಸ್, ರಈಸಾರ ಆಕೆಯ ತಾಯಿ ರುಕ್ಸಾನಾ ಈ ಸಂದರ್ಭ ಉಪಸ್ಥಿತರಿದ್ದರು.
ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಇಕ್ಬಾಲ್ ಕಟಪಾಡಿ, ಕಾರ್ಕಳ ತಾಲೂಕು ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾ ಸಮಿತಿ ಸದಸ್ಯ ಶರೀಫ್ ಕಾರ್ಕಳ ಭಾಗವಹಿಸಿದ್ದರು.
ಉದ್ಯಮಿ ಮುಹ್ಸಿನ್ (ಗೋವಾ) ವಿಶೇಷ ಆಹ್ವಾನಿತರಾಗಿದ್ದರು. ಕಾರ್ಕಳದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಶ್ಫಾಕ್ ಅಹ್ಮದ್ ಕಾರ್ಕಳ, ತಾಲೂಕು ಕಾರ್ಯದರ್ಶಿ ಸೈಯದ್ ಹಸನ್ ಹಾಗೂ ತಾಲೂಕು ಸಮಿತಿ ಸದಸ್ಯ ನಾಸಿರ್ ಶೇಖ್ ಉಪಸ್ಥಿತರಿದ್ದರು.