ಮಂಗಳೂರು: ‘ಬಿಸೆಲಿಲ್ ಬೀತಿಯೊ ಕಲ್ತಪ್ಪ ಪಿನ್ನೆ ಚಾಯ’ ಕಾರ್ಯಕ್ರಮ
ಮಂಗಳೂರು, ಎ.19: ಇಮಾಂ ಗಝ್ಝಲಿ ಫೌಂಡೇಶನ್ ಮಂಗಳೂರು ಇದರ ವತಿಯಿಂದ ನಗರದ ಸ್ಟೇಟ್ಬ್ಯಾಂಕ್ ಸಮೀಪದ ಕ್ಯಾಪಿಟಲ್ ಅವೆನ್ಯೂ ನೆಲ ಅಂತಸ್ತು ಕಟ್ಟಡದಲ್ಲಿ ಶುಕ್ರವಾರ ನಡೆದ ‘ಬಿಸೆಲಿಲ್ ಬೀತಿಯೊ ಕಲ್ತಪ್ಪ ಪಿನ್ನೆ ಚಾಯ’ ಮತ್ತು ‘ನೋಂಬುಗು ಮರ್ಹಬ ಲೇಸ್’ ನಡೆಯಿತು.
ಬ್ಯಾರಿ ಸಾಹಿತ್ಯ ಅಕಾಡಮಿಗಾಗಿ ರಾತ್ರಿ ಹಗಲು ಶ್ರಮಿಸಿದ ಬ್ಯಾರಿ ನಾಯಕರು, ಸಾಹಿತಿ, ಕಲಾವಿದರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಬ್ಯಾರಿಗಳ ಸ್ವಾದಿಷ್ಟ ಆಹಾರಗಳಲ್ಲಿ ಒಂದಾದ ‘ಬಿಸೆಲಿಲ್ ಬೀತಿಯೊ ಕಲ್ತಪ್ಪ’ ಸವಿಯುವ ಅವಕಾಶವನ್ನು ಸಂಘಟಕರು ನೀಡಿದರು. ಸ್ಥಳದಲ್ಲೇ ತಯಾರಿಸಲಾದ ‘ಕಲ್ತಪ್ಪ’ ತಿಂದು ಮತ್ತು ‘ಚಾಯ’ ಕುಡಿದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಜೊತೆಗೆ ‘ನೋಂಬುಗು ಮರ್ಹಬ ಲೇಸ್’ ಮೂಲಕ ರಮಝಾನ್ ಉಪವಾಸಕ್ಕೆ ಸಂಬಂಧಿಸಿ ಬ್ಯಾರಿಗಳು ನಡೆಸುವ ಸಿದ್ಧತೆಯ ಬಗ್ಗೆಯೂ ನೆನಪಿಸಲಾಯಿತು.
ಮಾಜಿ ಮೇಯರ್ ಕೆ. ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಬ್ಯಾರಿ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಬ್ಯಾರಿ ಅಕಾಡಮಿ, ಅಧ್ಯಯನ ಪೀಠದ ಕೊಡುಗೆ ಅಪಾರವಾಗಿದೆ ಎಂದರು.
ಸಾಹಿತಿಗಳಾದ ಯು.ಎ.ಖಾಸಿಂ ಉಳ್ಳಾಲ, ಬಿ.ಎ.ಮುಹಮ್ಮದ್ ಅಲಿ ಮಾತನಾಡಿದರು. ಹುಸೈನ್ ಕಾಟಿಪಳ್ಳ, ಹಸನಬ್ಬ ಮೂಡಬಿದ್ರೆ ಕವನ ವಾಚಿಸಿದರು. ಶೇಖ್ ಮಹಮ್ಮದ್ ಇರ್ಫಾನಿ ಉಪವಾಸದ ಮಹತ್ವದ ಬಗ್ಗೆ ಸಂದೇಶ ನೀಡಿದರು.
ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಇಮಾಂ ಗಝಾಲಿ ಫೌಂಡೇಶನ್ನ ಅಧ್ಯಕ್ಷ ಆರೀಸ್ ತೋಡಾರ್, ಅಬ್ದುಲ್ ಖಾದರ್ ಕುತ್ತೆತ್ತೂರು, ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಿ.ಎಂ.ಮುಸ್ತಪ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮುಸ್ಲಿಂ ಒಕ್ಕೂಟದ ಸದಸ್ಯ ಯು.ಮುಹಮ್ಮದ್ ಹನೀಫ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಮುಹಮ್ಮದ್ ಬಪ್ಪಳಿಗೆ, ಅಬ್ದುಲ್ ರಹ್ಮಾನ್ ಭಟ್ಕಳ್ ಮತ್ತಿತರರು ಪಸ್ಥಿತರಿದ್ದರು. ಯೂಸುಫ್ ವಕ್ತಾರ್ ಸ್ವಾಗತಿಸಿದರು.