ಕುಂದಾಪುರ: ರೈಲು ಬಡಿದು ಮತದಾನಕ್ಕೆ ತೆರಳುತಿದ್ದ ವ್ಯಕ್ತಿ ಮೃತ್ಯು
ಕುಂದಾಪುರ, ಎ.19: ಮತದಾನ ಮಾಡಲೆಂದು ಆನಗಳ್ಳಿ ಗ್ರಾಮದ ದೂಪದಕಟ್ಟೆ ಮನೆಯಿಂದ ತೆರಳಿದ ವೃದ್ಧರೊಬ್ಬರು ರೈಲು ಹಳಿಯ ಮೇಲೆ ನಡೆದು ಹೋಗುತ್ತಿರುವಾಗ ರೈಲು ಬಡಿದು ಮೃತಪಟ್ಟ ಘಟನೆ ಹಟ್ಟಿಕುದ್ರು ಬಳಿ ಕೊಂಕಣ ರೈಲು ಮಾರ್ಗದಲ್ಲಿ ಗುರುವಾರ ಸಂಭವಿಸಿದೆ.
ಮೃತರನ್ನು ಆನಗಳ್ಳಿ ದೂಪದಕಟ್ಟೆ ಮನೆ ನಿವಾಸಿ ಅಣ್ಣು (75) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬಸ್ರೂರಿನಲ್ಲಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿಬರುವುದಾಗಿ ತಿಳಿಸಿ ಹೋದವರು ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದರು. ಮನೆಯವರು ಮನೆಯ ಆಸುಪಾಸಿ ನಲ್ಲೆಲ್ಲಾ ಹುಡುಕಾಡಿದ್ದರೂ ಎಲ್ಲೂ ಪತ್ತೆಯಾಗಿರಲಿಲ್ಲ.
ಬಳಿಕ ಇಂದು ಬೆಳಗ್ಗೆ ಅಣ್ಣು ಅವರಿಗಾಗಿ ಹುಡುಕುತ್ತಾ ಆನಗಳ್ಳಿಯಿಂದ ರೈಲು ಹಳಿಯಲ್ಲಿ ನಡೆದು ಹೋಗುವಾಗ ಹಟ್ಟಿಕುದ್ರು ಬೊಬ್ಬರ್ಯನ ದೈವಸ್ಥಾನದ ಮನೆ ಎಂಬಲ್ಲಿ ಕೊಂಕಣ ರೈಲ್ವೆ ಹಳಿಯ ಪಕ್ಕದ ಪೊದೆಯಲ್ಲಿ ಅವರ ಮೃತದೇಹವು ಬಿದ್ದುಕೊಂಡಿತ್ತು.
ತನ್ನ ತಂದೆಯವರಿಗೆ ವಯಸ್ಸಾಗಿದ್ದು, ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ. ಅಲ್ಲದೇ ಅವರಿಗೆ ಮರೆವು ಕೂಡಾ ಇದ್ದು, ಹಟ್ಟಿಕುದ್ರು ಬಳಿ ನಡೆದುಕೊಂಡು ರೈಲ್ವೆ ಹಳಿಬದಿ ಹಟ್ಟಿಕುದ್ರು ಶಾಲೆಯತ್ತ ಹೋಗುವಾಗ ರೈಲು ಬಡಿದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿರಬೇಕೆಂದು ಮೃತರ ಪುತ್ರ ಉದಯ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.