ದೇರೆಬೈಲು: ಪತಿಯಿಂದ ಪತ್ನಿಯ ಕೊಲೆ
ಮಂಗಳೂರು, ಎ.20: ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತ್ನಿಯನ್ನು ಪತಿಯು ಮಾರಕಾಯುಧಗಳಿಂದ ಕಡಿದು ಕೊಲೆಗೈದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಬೋರುಗುಡ್ಡೆ ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.
ಮೃತರನ್ನು ಕೂಲಿ ಕಾರ್ಮಿಕಳಾದ ಮಂಜುಳಾ(38) ಎಂದು ಗುರುತಿಸಲಾಗಿದೆ. ಈಕೆಯ ಪತಿ ಶರಣಪ್ಪ(48) ಕೊಲೆ ಆರೋಪಿಯಾಗಿದ್ದಾನೆ.
ಮೂಲತಃ ಬಾಗಲಕೋಟೆಯವರಾದ ಈ ದಂಪತಿ ಬೋರುಗುಡ್ಡೆಯಲ್ಲಿ ನೆಲೆಸಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ.
ಕುಡಿತದ ಚಟ ಹೊಂದಿದ್ದ ಶರಣಪ್ಪ ನಿನ್ನೆ ರಾತ್ರಿ ಪತ್ನಿ ಮಂಜುಳಾರನ್ನು ಕತ್ತಿ ಮತ್ತು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ. ಅನೈತಿಕ ಸಂಬಂಧ ಶಂಕಿಸಿ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story