ಶಿವಮೊಗ್ಗ ಲೋಕಸಬಾ ಚುನಾವಣೆ: ಬೈಂದೂರಿನಲ್ಲಿ ಕರ್ತವ್ಯ ನಿರ್ವಹಣೆಗೆ ವಾಹನ ವ್ಯವಸ್ಥೆ
ಉಡುಪಿ, ಎ.20: ಮುಂದಿನ ಮಂಗಳವಾರ ಎ.23ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕೆಲಸ ಕಾರ್ಯ ನಿರ್ವಹಿಸಲು, ಜಿಲ್ಲೆಯ ವಿವಿಧ ತಾಲೂಕು ಗಳಿಂದ ಅಧಿಕಾರಿ, ಸಿಬ್ಬಂದಿಗಳನ್ನು ಪಿಆರ್ಓ, ಎಪಿಆರ್ಓ, ಪಿಓ ಆಗಿ ನಿಯೋಜಿಸಿ ಆದೇಶಿಸಲಾಗಿದೆ.
ನಿಯೋಜಿತ ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳು, ಬೈಂದೂರು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರವಾದ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿ ಎ.22ರ ಬೆಳಗ್ಗೆ ಹಾಜರಾಗಬೇಕಿದೆ.
ಇದಕ್ಕಾಗಿ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ ಸಿಬ್ಬಂದಿಗಳಿಗೆ ಅವರ ತಾಲೂಕು ಕೇಂದ್ರಗಳಿಂದ ಬೈಂದೂರಿನ ಮಸ್ಟರಿಂಗ್ ಕೇಂದ್ರಕ್ಕೆ ಕರೆದು ಕೊಂಡು ಹೋಗಲು ಬಸ್ಗಳ ವ್ಯವಸ್ಥೆಯನ್ನು ಉಡುಪಿ, ಕಾಪು, ಕಾರ್ಕಳ, ಕುಂದಾಪುರ ತಾಲೂಕು ಕೇಂದ್ರಗಳಲ್ಲಿ ಮಾಡಲಾಗಿದೆ.
ಬಸ್ಗಳು ಎ.22ರ ಸೋಮವಾರ ಬೆಳಗ್ಗೆ 6:30ಕ್ಕೆ ಹೊರಡಲಿದ್ದು, ನಂತರ ಬಸ್ ವ್ಯವಸ್ಥೆ ಇರುವುದಿಲ್ಲ. ಹಾಗೂ ಚುನಾವಣೆ ಮುಗಿದು ಡಿಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ ಮತಯಂತ್ರಗಳನ್ನು ಹಸ್ತಾಂತರಿಸಿದ ಬಳಿಕ ವಾಪಸ್ ಕೇಂದ್ರ ಸ್ಥಾನಗಳಿಗೆ ಹೋಗಲು ಬಸ್ ವ್ಯವಸ್ಥೆಯನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿ ಮಾಡಲಾಗಿದೆ.
ಕುಂದಾಪುರದಲ್ಲಿ ಕುಂದಾಪುರ ತಾಲೂಕು ಕಚೇರಿ ಬಳಿಯಿಂದ, ಉಡುಪಿ ಯಲ್ಲಿ ತಾಲೂಕು ಕಚೇರಿ ಉಡುಪಿ ಮತ್ತು ಸಿಟಿ ಬಸ್ ನಿಲ್ದಾಣ ಉಡುಪಿ ಯಿಂದ, ಕಾಪುನಲ್ಲಿ ತಾಲೂಕು ಕಚೇರಿ ಕಾಪು ಮತ್ತು ಬಸ್ನಿಲ್ದಾಣ ಕಾಪು ನಿಂದ, ಕಾರ್ಕಳದಲ್ಲಿ ತಾಲೂಕು ಕಚೇರಿ ಕಾರ್ಕಳ ಮತ್ತು ಬಸ್ ನಿಲ್ದಾಣ ಬಂಡಿಮಠ ಇಲ್ಲಿಂದ ಬೆಳಗ್ಗೆ 6:30ಕ್ಕೆ ಬಸ್ಗಳು ಹೊರಡಲಿದ್ದು, ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.