ಇನೋಳಿ: ಎಸ್ಸೆಸ್ಸೆಫ್-ಎಸ್ವೈಎಸ್ ವತಿಯಿಂದ ಸಾಮೂಹಿಕ ವಿವಾಹ
ಉಳ್ಳಾಲ, ಎ.20: ಪಾವೂರು ಗ್ರಾಮದ ಇನೋಳಿ ಎಸ್ಸೆಸ್ಸೆಫ್ ಮತ್ತು ಎಸ್ವೈಎಸ್ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಇನೋಳಿ ಐ.ಕೆ. ಅಬ್ದುಲ್ ಹಮೀದ್ ಮುಸ್ಲಿಯಾರ್ ವೇದಿಕೆಯಲ್ಲಿ ಶನಿವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮುಖ್ಯ ಭಾಷಣಗೈದ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಮುಸ್ತಫಾ ನಯೀಮಿ ಹಾವೇರಿ ಹೆಣ್ಮಕ್ಕಳನ್ನು ಇಸ್ಲಾಂ ಎಂದಿಗೂ ಬಂಧನ ದಲ್ಲಿಟ್ಟಿಲ್ಲ. ಬದಲಾಗಿ ಸಾಕಷ್ಟು ಹಕ್ಕನ್ನು ನೀಡಿದೆ. ಪತಿ-ಪತ್ನಿಯ ಮಧ್ಯೆ ಜೀವನ ಸಾಗಿಸಲು ಅಸಾಧ್ಯ ಎಂದಾದಾಗ ಪರಸ್ಪರ ಬೇರ್ಪಡುವ ಅವಕಾಶವನ್ನೂ ನೀಡಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ವಿವಾಹವು ಹೆಣ್ಣು-ಗಂಡಿನ ಬದುಕಿನ ಮುಖ್ಯ ತಿರುವು ಆಗಿದ್ದು, ಸುಮಧುರ ಬದುಕಿಗೆ ದಾರಿಯಾಗಿದೆ ಎಂದರು.
ವಿವಾಹದ ನೇತೃತ್ವ ವಹಿಸಿದ್ದ ಮಂಜನಾಡಿಯ ಅಲ್ ಮದೀನಾ ಸಂಸ್ಥೆಯ ಅಧ್ಯಕ್ಷ ಅಲ್ಹಾಜ್ ಅಬ್ಬಾಸ್ ಮುಸ್ಲಿಯಾರ್ ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ ಚಾಚುವವರಿಗೆ ಎಂದಿಗೂ ಪರಾಜಯ ಇಲ್ಲ. ಅಲ್ ಮದೀನಾದಲ್ಲಿ ಕಳೆದ 16 ವರ್ಷಗಳಲ್ಲಿ ಸಾಮೂಹಿಕ ವಿವಾಹದ ಮೂಲಕ 500 ಮಂದಿ ದಾಂಪತ್ಯ ಪ್ರವೇಶಿಸಿದ್ದಾರೆ. ಇನೋಳಿಯಲ್ಲಿ ಪ್ರತೀ ವರ್ಷವೂ ಸಾಮೂಹಿಕ ವಿವಾಹ ನಡೆಯಲಿ ಎಂದರು.
ಅತಿಥಿಗಳಾಗಿ ಬೋಳಿಯಾರ್ ಜಾರದಗುಡ್ಡ ಜುಮಾ ಮಸೀದಿಯ ಖತೀಬ್ ಅಸೈಯದ್ ಅಮೀರ್ ಅಸ್ಸಖಾಫ್ ತಂಙಳ್ ನಾದಾಪುರಂ ದುಆಗೈದರು. ಮುಡಿಪು ಎಜುಪಾರ್ಕ್ ಅಧ್ಯಕ್ಷ ಅಸೈಯದ್ ಮುಹಮ್ಮದ್ ಅಶ್ರಫ್ ಮದನಿ ಅಸ್ಸಖಾಫ್ ತಂಙಳ್ ಆದೂರು, ಫರೀದ್ ನಗರ ರಿಫಾಯಿಯಾ ಜುಮಾ ಮಸೀದಿಯ ಖತೀಬ್ ಅಸೈಯದ್ ಶರಫುದ್ದೀನ್ ಅಲ್ ಹೈದ್ರೋಸಿ ತಂಙಳ್, ಎಸ್ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಭಾಗವಹಿಸಿದ್ದರು.
ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಮುನೀರ್ ಸಖಾಫಿ, ತೌಸೀಫ್ ಸಅದಿ ಹರೇಕಳ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಖುಬೈಬ್ ತಂಙಳ್, ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್, ಝಫರುಲ್ಲಾ ಒಡೆಯರ್, ಸಾಜಿ ಒಡೆಯರ್, ಐ.ಎಚ್.ಅಬ್ದುಲ್ ಖಾದರ್, ಹುಸೈನ್ ಕಡವು, ಚಕ್ಕರ್ ಮುಹಮ್ಮದ್ ಮೋನು, ಇಸ್ಮಾಯೀಲ್ ಕಿಲ್ಲೂರು, ಶಬೀರ್, ಕರೀಂ ಕೆ.ಎಚ್ ಉಪಸ್ಥಿತರಿದ್ದರು.
ಝೈನುದ್ದೀನ್ ಕಿರಾಆತ್ ಪಠಿಸಿದರು. ಅಝೀಝ್ ಚಕ್ಕರ್ ಸ್ವಾಗತಿಸಿದರು. ಸ್ವಾಗತ ಸಮೀತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ವಂದಿಸಿದರು. ನೌಫಲ್ ಮರ್ಝೂಕಿ ಕಾರ್ಯಕ್ರಮ ನಿರೂಪಿಸಿದರು.