ಪಿಲಿಕುಳದಲ್ಲಿ ‘ರಜಾಮಜಾ’ ಬೇಸಿಗೆ ಶಿಬಿರಕ್ಕೆ ಚಾಲನೆ
ಮಂಗಳೂರು, ಎ.20: ಪಿಲಿಕುಳದಲ್ಲಿ ಪ್ರತಿವರ್ಷದಂತೆ ಶಾಲಾ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳನ್ನೊಳಗೊಂಡ ಐದನೆಯ ವರ್ಷದ ಬೇಸಿಗೆ ಶಿಬಿರ ‘ರಜಾಮಜಾ’ ಶನಿವಾರ ಬೇವಿನ ಗಿಡ ನೆಟ್ಟು ನೀರು ಹಾಕಿ ವಾಲೆ ಬೆಲ್ಲವನ್ನು ಹಂಚುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭ ಒಂದು ಮೊಟ್ಟೆಯ ಕಥೆ ಸಿನಿಮಾ ಖ್ಯಾತಿಯ ರಾಜ್ ಬಿ. ಶೆಟ್ಟಿ, ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಯತೀಶ್ ಬೈಕಂಪಾಡಿ, ಉದ್ಯಮಿ ಅಜಿತ್ ಸುವರ್ಣ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಶಿಬಿರದ ಸಂಯೋಜಕ ಮೈಮ್ ರಾಮದಾಸ್ ಉಪಸ್ಥಿತರಿದ್ದರು.
ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಜನಪದ ಹಾಡು ಮತ್ತು ಕುಣಿತಗಳು, ಕುಶಲಕರ್ಮಿಗಳ ಜೊತೆ ಪ್ರಾತ್ಯಕ್ಷಿಕೆ, ಗಿಡಮೂಲಿಕೆಗಳ ಕುರಿತು ಪರಿಚಯ, ಎಲೆಗಳ ಕೊಲಾಜ್, ಕೌಶಲ್ಯ ತರಬೇತಿ, ಮನೋರಂಜನಾ ಆಟಗಳು, ಸ್ವರ ವ್ಯಾಯಾಮ, ಕ್ರಿಯೇಟಿವ್ ಆರ್ಟ್, ರಂಗ ವ್ಯಾಯಾಮ, ಮುಖವಾಡ ರಚನೆ, ಅಭಿನಯ ಗೀತೆ, ಕ್ಲೇ ಮೋಡಲ್, ಮೈಮ್, ಮಿಮಿಕ್ರಿ, ಗೋಡೆ ಪತ್ರಿಕೆ, ಕಥೆ ರಚನೆ, ನಾಟಕ, ವರ್ಲಿ ಕಲೆ, ಹಾಡುಗಳು, ಗೊಂಬೆ ತಯಾರಿಕೆ, ಜಾದೂ, ಪರಿಸರ ವೀಕ್ಷಣೆ ಮತ್ತು ಸಂರಕ್ಷಣೆ, ವಿಜ್ಞಾನ ಕೌತುಕದ ಜೊತೆಗೆ ಪಿಲಿಕುಳ ನಿಸರ್ಗಧಾಮದ ವಿವಿಧ ವಿಭಾಗಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಡಾ ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.