ಲಲಿತಾ ಕಲೆಗಳು ಮನುಷ್ಯನ ಅಂತಂಗವನ್ನು ಬೆಳೆಸುತ್ತವೆ: ಉಷಾಲತಾ
ಮೂರು ದಿನಗಳ ‘ಆನಂದೋತ್ಸವ- 2019’ ಉದ್ಘಾಟನೆ
ಉಡುಪಿ, ಎ.20: ಮನುಷ್ಯನಾಗಬೇಕಾದರೆ ಆತನಲ್ಲಿ ಕಲಾಸಕ್ತಿ ಅತಿ ಅಗತ್ಯ. ಲಲಿತಾ ಕಲೆಗಳು ಮನುಷ್ಯನ ಅಂತರಂಗವನ್ನು ಬೆಳೆಸುತ್ತವೆ. ಇಂದಿನ ಕಾಲದಲ್ಲಿ ನಾಟಕ, ಸಾಹಿತ್ಯ, ಸಂಗೀತವು ಮನುಷ್ಯನನ್ನು ಹೆಚ್ಚು ಮನುಷ್ಯನನ್ನಾಗಿಸುತ್ತದೆ ಎಂದು ಮಂಗಳೂರು ಆಕಾಶವಾಣಿ ಸಹಾಯಕ ನಿಲಯ ನಿರ್ದೇಶಕಿ ಉಷಾ ಲತಾ ಎಸ್. ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿ ಕೊಳ್ಳಲಾದ ಮೂರು ದಿನಗಳ ‘ಆನಂದೋತ್ಸವ- 2019’ ನಾಟಕೋತ್ಸವವನ್ನು ಶನಿವಾರ ಉ್ಘಾಟಿಸಿ ಅವರು ಮಾತನಾಡುತಿದ್ದರು.
ಕೇವಲ ಮೆದುಳು, ಬುದ್ದಿವಂತಿಕೆ ಇದ್ದರೆ ಸಾಕಾಗುವುದಿಲ್ಲ. ನಮ್ಮಲ್ಲಿ ಭಾವನೆ ಕೂಡ ಮುಖ್ಯವಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ನಾವು ಮಾಹಿತಿ ಗಳನ್ನು ಸಂಗ್ರಹಿಸಿ ಅಂಕೆ ಸಂಖ್ಯೆಯ ಗೊಂದಲದಲ್ಲಿಯೇ ಕಳೆದು ಹೋಗುತ್ತಿ ದ್ದೇವೆ. ನಾವು ಸಮಾತೋಲಿತ ವ್ಯಕ್ತಿಗಳಾಗಬೇಕಾದರೆ ಕಲೆ ತುಂಬಾ ಅಗತ್ಯ ವಾಗಿರುತ್ತದೆ ಎಂದರು.
ಒಂದು ಕಾಲದ ಆಕಾಶವಾಣಿಯಲ್ಲಿ ಮಾನವೀಯ ನಾಟಕ ತುಂಬಾ ಖ್ಯಾತಿ ಪಡೆದಿತ್ತು. ಇದರಿಂದ ಅದರ ಕಲಾವಿದರುಗಳು ಕೂಡ ಸಾಕಷ್ಟು ಹೆಸರ ಗಳಸಿದ್ದರು. ಆದರೆ ಕಾಲದ ಬದಲಾವಣೆ ಪರಿಣಾಮ ಕಳೆದ ವರ್ಷ ಹಮ್ಮಿ ಕೊಳ್ಳಲಾದ ಮಾನವೀಯ ನಾಟಕ ಬರೆಯುವ ಸ್ಪರ್ಧೆಗೆ ಬಂದ ನಾಟಕಗಳ ಸಂಖ್ಯೆ ತುಂಬಾ ಕಡಿಮೆ. ಆದರೂ ಆಕಾಶವಾಣಿ ನಾಟಕದ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿವೆ ಎಂದು ಅವರು ತಿಳಿಸಿದು.
ಮುಂಬೈ ನ್ಯಾಯವಾದಿ ಬಾಲಚಂದ್ರ ಯು., ಉದ್ಯಮಿ ರಾಜೇಂದ್ರ ಗಾಣಿಗ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ರಂಗನಿರ್ದೇಶಕ ಗಣೇಶ್ ಎಂ.ಉಡುಪಿ ಅವರಿಗೆ ರಂಗ ಗೌರವ ನೆರವೇರಿಸಲಾಯಿತು. ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್, ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನಂದ ಕುಮಾರ್ ಎಂ. ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ರಂಗಭೂಮಿ ತಂಡದಿಂದ ‘ಕಾಮ್ಯ ಕಲಾ ಪ್ರತಿಮಾ’ ನಾಟಕ ಪ್ರದರ್ಶನಗೊಂಡಿತು.