ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ಮಂಗಳೂರಿನ ಗೃಹಿಣಿ ಬಲಿ
ಮಂಗಳೂರು, ಎ. 21: ಶ್ರೀಲಂಕಾದ ಹೋಟೆಲ್ನಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕುಕ್ಕಾಡಿಯ ಮಹಿಳೆಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಕಂಪಾಡಿ ಸಮೀಪದ ಕುಕ್ಕಾಡಿಯ ಅಬ್ದುಲ್ ಖಾದರ್ ಎಂಬವರ ಪತ್ನಿ ರಝೀನಾ ಖಾದರ್ (58) ಎಂದು ಗುರುತಿಸಲಾಗಿದೆ.
ರಝೀನಾ ಅವರು ಮೂಲತಃ ಶ್ರೀಲಂಕಾದವರು ಎನ್ನಲಾಗಿದೆ. ಹಾಗಾಗಿ ಇವರು ಕುಟುಂಬ ಸಮೇತ ಶ್ರೀಲಂಕಾಕ್ಕೆ ತೆರಳುತ್ತಿದ್ದರು. ಇತ್ತೀಚೆಗೆ ಖಾದರ್ ಮತ್ತು ರಝೀನಾ ಶ್ರೀಲಂಕಾಕ್ಕೆ ತೆರಳಿದ್ದು, ರವಿವಾರ ಬೆಳಗ್ಗೆ ಖಾದರ್ ದುಬೈಗೆ ಪ್ರಯಾಣ ಬೆಳೆಸಿದರೆ, ರಝೀನಾ ಬೆಂಗಳೂರು ಮೂಲಕ ಮಂಗಳೂರಿಗೆ ಆಗಮಿಸುವವರಿದ್ದರು. ಹಾಗೇ ಶ್ರೀಲಂಕಾದ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದಾಗ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ರಝೀನಾ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದುಬೈಗೆ ಪ್ರಯಾಣ ಬೆಳೆಸಿದ್ದ ಅಬ್ದುಲ್ ಖಾದರ್ ಮರಳಿ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಈ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದು, ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.