ಡಾ.ಎಚ್.ಶಾಂತಾರಾಮ್ಗೆ ‘ತಲ್ಲೂರು ಗಿರಿಜಾ, ಡಾ.ಶಿವರಾಮ ಶೆಟ್ಟಿ’ ಪ್ರಶಸ್ತಿ ಪ್ರದಾನ
ಉಡುಪಿ, ಎ.21: ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ ಆನಂದೋತ್ಸವದ ಎರಡನೆ ದಿನವಾದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಡಳಿತಗಾರ, ಕಲಾ ಆರಾಧಕ, ಶಿಕ್ಷಣ ತಜ್ಞ ಡಾ.ಎಚ್.ಶಾಂತಾರಾಮ್ ಅವರಿಗೆ ‘ತಲ್ಲೂರು ಗಿರಿಜಾ ಡಾ. ಶಿವರಾಮ ಶೆಟ್ಟಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಶಾಂತಾರಾಮ ಅವರ ಪಾತ್ರ ಅಪಾರವಾದುದು. ಶಾಂತಾರಾಮ್ ಬಹು ಮುಖ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಡಾ.ಎಚ್.ಶಾಂತಾರಾಮ ಮಾತನಾಡಿ, ಆಧುನಿಕ ತಂತ್ರಜ್ಞಾನಗಳಿಂದ ನೈಸರ್ಗಿಕ ವಸ್ತುಗಳ ಉಪಯೋಗ ಆಗುತ್ತಿಲ್ಲ. ಇದ ರಿಂದಾಗಿಯೇ ಮೆದುಳಿನ ಕಾರ್ಯವೈಖರಿಯನ್ನು ನಾವು ಮರೆಯುತ್ತಿದ್ದೇವೆ ಎಂದು ತಿಳಿಸಿದರು.
ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಆರ್ಆರ್ಸಿಯ ಆಡಳಿತಾಧಿಕಾರಿ ಡಾ.ಎಂ.ಎಲ್.ಸಾಮಗ, ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.