ಮಂಗಳೂರಿನಲ್ಲಿ ಕೃತಕ ನೀರಿನ ಅಭಾವ ಸೃಷ್ಟಿ: ಜೆ.ಆರ್.ಲೋಬೊ ಆರೋಪ
ಮಂಗಳೂರು, ಎ.22: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯ ಕೃತಕ ಅಭಾವ ಸೃಷ್ಟಿಯಾಗಿದೆ. ನಿರಂತರ ನೀರು ಪೂರೈಕೆ ಮಾಡಲು ಸಾಕಾಗುವಷ್ಟು ನೀರು ತುಂಬೆ ಕಿಂಡಿ ಅಣೆಕಟ್ಟಿನಲ್ಲಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದಲ್ಲಿ ನೀರು ಪೂರೈಕೆಯನ್ನು ವಾರದ ಕೆಲವು ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಳಿಸುವುದರಿಂದ ( ಏರ್ ಲಾಕ್) ನಿರ್ವಾತ ಪ್ರದೇಶದಲ್ಲಿ ಗಾಳಿ ತುಂಬಿ ನೀರು ಪೂರೈಕೆಗೆ ಸಮಸ್ಯೆಯಾಗುತ್ತದೆ ಆಗಿ ನೀರು ಪೂರೈಕೆಯಲ್ಲಿ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆ ಕಾರಣದಿಂದ ನಿರಂತರ ನೀರು ಪೂರೈಕೆ ಮಾಡುವುದು ಸರಿಯಾದ ಕ್ರಮ. ತುಂಬೆಯಲ್ಲಿ ಈ ಹಿಂದೆ ಕೇವಲ 4 ಮೀಟರ್ ನೀರು ಸಂಗ್ರಹದ ಸಾಮರ್ಥ್ಯ ಇತ್ತು. ಈಗ 7 ಮೀಟರ್ ಎತ್ತರದ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. 6 ಮೀಟರ್ ಎತ್ತರದವರೆಗೆ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಸದ್ಯ ಅಲ್ಲಿ 5.2 ಮೀಟರ್ ನೀರು ಸಂಗ್ರಹವಿದೆ. ಈ ಸಂದರ್ಭ ಮನಪಾ ವ್ಯಾಪ್ತಿಯ ಕೆಲವು ಎತ್ತರ ಪ್ರದೇಶಗಳನ್ನು ಹೊರತುಪಡಿಸಿ ಪ್ರತಿದಿನ ನೀರು ಪೂರೈಸಬಹುದಾಗಿದೆ. ಎತ್ತರ ಪ್ರದೇಶಕ್ಕೆ ತಾಂತ್ರಿಕ ಕಾರಣದಿಂದ ಪ್ರತೂ ಎರಡು ದಿನಗಳಿಗೆ ಒಂದು ಬಾರಿ ನೀರು ನೀಡಲು ಸಾಧ್ಯ. ಈ ಹಿಂದೆ ಇದಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹವಿದ್ದಾಗಲೂ ಜನರಿಗೆ ಕುಡಿಯುವ ನೀರನ್ನು ನೀಡಲಾಗುತ್ತಿತ್ತು ಎಂದು ಲೋಬೊ ವಿವರಿಸಿದರು.
ಮಂಗಳೂರು ಮನಪಾ ವ್ಯಾಪ್ತಿಯ ತೆರೆದ ಬಾವಿ, ಕೊಳವೆಬಾವಿಗಳ ದುರಸ್ತಿಯ ಬಗ್ಗೆಯೂ ಈ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಂದು ಜೆ.ಆರ್.ಲೋಬೊ ಒತ್ತಾಯಿಸಿರದು.
* ಶಾಸಕರೇ ನೀರು ಪೂರೈಕೆ ನಿಮ್ಮ ಹೊಣೆಗಾರಿಕೆ:
ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಅಧಿಕಾರದಲ್ಲಿಲ್ಲ. ಕೇವಲ ಅಧಿಕಾರಿಗಳು ಬಿಟ್ಟರೆ ಶಾಸಕರು ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಹಿಂದಿನ ಮನಪಾ ಸದಸ್ಯರನ್ನು ದೂರುವ ಬದಲು ಜನರಿಗೆ ನಿರಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಿ. ಅದು ಅವರ ಹೊಣೆಗಾರಿಕೆಯಾಗಿದೆ ಎಂದು ಜೆ.ಆರ್.ಲೋಬೊ ಒತ್ತಾಯಿಸಿದರು.
*2016ರಲ್ಲಿ ಪ್ರತಿದಿನ ಕೇವಲ ಒಂದು ಮೀಟರ್ ಎತ್ತರದಲ್ಲಿ ಮಾತ್ರ ನೀರು ಸಂಗ್ರಹವಾಗಿದ್ದಾಗ ಪ್ರತಿದಿನ ನೀರು ಪೂರೈಕೆ ಮಾಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಪ್ರತಿದಿನ ಜನರಿಗೆ ಕುಡಿಯುವ ನೀರು ನೀಡಬಹುದಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವ ಕಾರಣ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದೆ ಹೋದರೆ ಮನಪಾ ವ್ಯಾಪ್ತಿಯ ಜನರೊಂದಿಗೆ ಮನಪಾ ಕಚೇರಿಗೆ ಮುತ್ತಿಗೆ ಹಾಕಬೇಕಾದೀತು ಎಂದು ಮಾಜಿ ಮೇಯರ್ ಹರಿನಾಥ್ ಎಚ್ಚರಿಕೆ ನೀಡಿದ್ದಾರೆ.
* ನೀರಿಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ:
ಮನಪಾ ವ್ಯಾಪ್ತಿಯಲ್ಲಿ ನಿರಂತರ ನೀರು ಪೂರೈಕೆ ಮಾಡಬಹುದಾಗಿದೆ. ಸದ್ಯ ನೀರನ್ನು ರೇಶನಿಂಗ್ ಮಾಡಬೇಕಾಗಿಲ್ಲ. ನಿರಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಮೇಯರ್ ಶಶಿಧರ್ ಹೆಗ್ಡೆ ತಿಳಿಸಿದ್ದಾರೆ.
* ಎಎಂಆರ್ ಡ್ಯಾಂನಲ್ಲಿದ್ದ ನೀರು ಏನಾಯಿತು
ಎಎಂಆರ್ ಡ್ಯಾಂನಲ್ಲಿ ಪೂರ್ಣ ಪ್ರಮಾಣದ ನೀರಿದೆ ಎಂದು ತಿಳಿಸಿದ ಅಧಿಕಾರಿಗಳು ಒಂದು ದಿನದ ಹಿಂದೆ ಕೇವಲ 1.5 ಮೀಟರ್ ಮಾತ್ರ ನೀರಿದೆ ಎಂದು ಉತ್ತರ ನೀಡುತ್ತಾರೆ ..? ಹಾಗಾದರೆ ಅಲ್ಲಿದ್ದ ನೀರು ಎಲ್ಲಿ ಹೋಯಿತು. ಇದಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಮದು ಮನಪಾ ಮಾಜಿ ಮೇಯರ್ ಮಾಹಾಬಲ ಮಾರ್ಲ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ದಯಾನಂದ ಶೆಟ್ಟಿ, ನವೀನ್ ಡಿ ಸೋಜ, ಲ್ಯಾನ್ಸಿಲಾಟ್ ಪಿಂಟೋ, ಜೆಸಿಂತಾ, ಮುಹಮ್ಮದ್ ಕುಂಜತ್ತ ಬೈಲ್ ಮೊದಲಾದವರು ಉಪಸ್ಥಿತರಿದ್ದರು.