ಕುಂತೂರಿನಲ್ಲಿ ಅಪಘಾತ: ಗಾಯಾಳು ಮೃತ್ಯು
ಕಡಬ, ಎ.22: ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ರವಿವಾರ ರಾತ್ರಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸೋಮವಾರದಂದು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಕೇರಳದ ಕಾಂಞಗಾಡ್ ಮೂಲದ ಮ್ಯಾಥ್ಯೂ (57) ಎಂದು ಗುರುತಿಸಲಾಗಿದೆ.
ಇವರು ರವಿವಾರ ರಾತ್ರಿ ರಸ್ತೆ ಬದಿಯಲ್ಲಿ ನಡೆದುಕೊಂಡು ತನ್ನ ನಿವಾಸಕ್ಕೆ ತೆರಳುತ್ತಿದ್ದಾಗ ಬಿಸಿರೋಡ್ನ ಮೂಸೆ ಕುಂಞಿ ಎಂಬವರು ಚಲಾಯಿಸುತ್ತಿದ್ದ ಟಾಟಾ ಏಸ್ ಢಿಕ್ಕಿ ಹೊಡೆದಿತ್ತು. ಪರಾರಿಯಾಗುತ್ತಿದ್ದ ಟೆಂಪೋವನ್ನು ಆಲಂಕಾರಿನಲ್ಲಿ ಸಾರ್ವಜನಿಕರು ತಡೆದು ಪೊಲೀಸರಿಗೆ ಒಪ್ಪಿಸಿದ್ದರು.
ಅಪಘಾತದ ತೀವ್ರತೆಗೆ ಪಾದಚಾರಿ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸೋಮವಾರ ಅವರು ಮೃತಪಟ್ಟಿದ್ದಾರೆ. ಮೃತರು ಕುಂತೂರು ಅಗತ್ತಾಡಿ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸು ತ್ತಿದ್ದರು. ಇವರು ಆಲಂಕಾರು ಪೇಟೆಗೆ ಬಂದು ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.