ಮಂಗಳೂರು: ನೀರಿನ ರೇಶನಿಂಗ್ ಕೈ ಬಿಡಲು ಆಗ್ರಹಿಸಿ ಶಾಸಕರ ಮನವಿ
ಮಂಗಳೂರು, ಎ.23: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಶನಿಂಗ್ ಪದ್ಧತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇದವ್ಯಾಸ ಕಾಮತ್, ಎಎಂಆರ್ ಡ್ಯಾಂನಿಂದ ತುಂಬೆ ಅಣೆಕಟ್ಟಿಗೆ ನೀರು ಹರಿಸಲು ಜಿಲ್ಲಾಧಿಕಾರಿ ಸಮ್ಮತಿ ಸಿದ್ದು, ಇದರಿಂದ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ತುಂಬೆಯ ನೀರಿನ ಮಟ್ಟವನ್ನು ಗಮನದಲ್ಲಿಟ್ಟು ರೇಶನಿಂಗ್ ವ್ಯವಸ್ಥೆಯನ್ನು ಕೈಬಿಡುವ ಬಗ್ಗೆ ಚಿಂತಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ ಎಂದರು.
ತುಂಬೆಯಲ್ಲಿ ಪಂಪಿಂಗ್ ಅನ್ನು 48 ಗಂಟೆ ನಿಲ್ಲಿಸಿದರೆ ನಂತರ ನೀರು ಮಂಗಳೂರಿನ ಎತ್ತರದ ಪ್ರದೇಶಗಳಿಗೆ ಮತ್ತು ಅನೇಕ ಆಯಕಟ್ಟಿನ ಜಾಗಗಳಿಗೆ ತಲುಪಲು ನಾಲ್ಕು ದಿನಗಳು ಬೇಕು. ಇದರಿಂದ ಜನಸಾಮಾನ್ಯರಿಗೆ ಅನಗತ್ಯವಾದ ತೊಂದರೆ ಆಗುತ್ತದೆ. ರೇಶನಿಂಗ್ ವ್ಯವಸ್ಥೆಯ ಮೂಲಕ ನೀರು ಅನೇಕ ವಾರ್ಡುಗಳಿಗೆ ತಲುಪುತ್ತಿಲ್ಲ. ನಾಲ್ಕು ದಿನಗಳಿಂದ ನೀರು ಪಂಪ್ ಆಗುತ್ತಿದ್ದು, ನಾಳೆಯಿಂದ ಎರಡು ದಿನ ಪಂಪಿಂಗ್ ನಿಲ್ಲಲಿದೆ. ಅನೇಕ ಕಡೆಗಳಲ್ಲಿ ಎರಡ್ಮೂರು ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಹಾಗಾಗಿ ಪಂಪಿಂಗ್ ನಿಲ್ಲಿಸಿದರೆ ಜನರು ತೊಂದರೆಗೆ ಸಿಲುಕುತ್ತಾರೆ ಎಂದರು.
ರಾಜಕಾಲುವೆ ಹೂಳೆತ್ತಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕೆಲವು ಭಾಗಗಳಲ್ಲಿ ಮಾತ್ರ ಹೂಳೆತ್ತಲಾಗುತ್ತಿದೆ. ಅದರ ಬದಲು ಸಂಪೂರ್ಣ ರಾಜ ಕಾಲುವೆಯ ಹೂಳು ತೆಗೆದರೆ ಕೃತಕ ನೆರೆ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಶಾಸಕ ಕಾಮತ್ ಈ ಸಂದರ್ಭ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಒಂದು ಮೀಟರ್ ಅಗಲದ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ನಡೆಸುವ ಹೊಣೆ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ನದ್ದಾಗಿದೆ. ಉತ್ತರ ಕರ್ನಾಟಕದ ಸಿಬ್ಬಂದಿ ವರ್ಗವು ಮತದಾನಕ್ಕೆ ತೆರಳಿದ ಕಾರಣದಿಂದ ಕೆಲಸ ನಿಂತಿದೆ ಎಂದು ಸಬೂಬು ನೀಡುತ್ತಿರುವುದು ಸರಿಯಲ್ಲ ಎಂದು ಶಾಸಕ ಕಾಮತ್ ಹೇಳಿದರು.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ದುರಸ್ತಿ ಮಾಡುವಾಗ ಪಂಪ್ವೆಲ್ ಬಳಿ ಅನೇಕ ಚರಂಡಿಗಳನ್ನು ಮುಚ್ಚಿರುವುದರಿಂದ ಮಳೆಗಾಲದಲ್ಲಿ ಕೃತಕ ನೆರೆಯ ಸಂಭವ ಇದೆ. ಅದನ್ನು ಸರಿಪಡಿಸಲು ಶಾಸಕ ಕಾಮತ್ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮನಪಾ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ವಿಜಯ ಕುಮಾರ್ ಶೆಟ್ಟಿ, ಸುರೇಂದ್ರ, ರಾಜೇಂದ್ರ, ಮೀರಾ ಕರ್ಕೇರಾ, ಪೂರ್ಣಿಮಾ, ರಾಜೇಶ್, ನವೀನ್ಚಂದ್ರ, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ರವಿಶಂಕರ್ ಮಿಜಾರ್ ಮತ್ತಿತರರಿದ್ದರು.