ಫರಂಗಿಪೇಟೆ-ಕುಂಪನಮಜಲು ಸಂಪರ್ಕಕ್ಕೆ ರೈಲ್ವೆ ಹಳಿ ಮೇಲಿನ ಸಂಚಾರಕ್ಕೆ ನಿರ್ಬಂಧ: ನಾಗರಿಕರಿಂದ ವಿರೋಧ
ಫರಂಗಿಪೇಟೆ, ಎ.24: ಫರಂಗಿಪೇಟೆ-ಕುಂಪನಮಜಲು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರೈಲ್ವೆ ಹಳಿಯ ಮೇಲೆ ಸಂಚಾರವನ್ನು ನಿರ್ಬಂಧಗೊಳಿಸುವ ಸಲುವಾಗಿ ರೈಲ್ವೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದು, ಸ್ಥಳೀಯ ನಾಗರಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ಫರಂಗಿಪೇಟೆಯಿಂದ ಕುಂಪನಮಜಲು ಹಾಗೂ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇದೀಗ ಇಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ರಸ್ತೆ ಇರುವಲ್ಲಿಂದ ಸುಮಾರು 300 ಮೀ. ಅಂತರದಲ್ಲಿ ರೈಲ್ವೆ ಹಳಿಗೆ ಅಂಡರ್ ಪಾಸ್ ಇದೆ. ಆದರೆ ಈ ಅಂಡರ್ ಪಾಸ್ ನಲ್ಲಿ ಮಳೆಗಾಳದಲ್ಲಿ ನೀರು ನಿಲ್ಲುವುದರಿಂದ ಸಂಚಾರ ಕಷ್ಟಕರವಾಗುತ್ತದೆ. ಅದಲ್ಲದೆ ಈ ರಸ್ತೆಯಿಂದ ಕುಂಪನಮಜಲಿಗೆ ಹೋಗಬೇಕಾದರೆ ಯು ಟರ್ನ್ ಮಾಡಿ ಸುಮಾರು 600 ಮೀ. ಸಂಚರಿಸಬೇಕಾಗಿದೆ. ಆದ್ದರಿಂದ ಈ ರಸ್ತೆಯನ್ನು ಮುಚ್ಚಬಾರದು ಎಂಬುದು ಸ್ಥಳೀಯರ ಆಗ್ರಹ.
ರೈಲ್ವೇ ಅಧಿಕಾರಿಗಳು, ‘’ಇಲ್ಲಿಂದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಅಮೆಮಾರ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಾನವ ಸಹಿತ ಗೇಟ್ ವ್ಯನಸ್ಥೆ ಇದೆ. ಆದ್ದರಿಂದ ಇಷ್ಟು ಕಡಿಮೆ ಅಂತರದಲ್ಲಿ ರೈಲ್ವೇ ಹಳಿ ಮೇಲೆ ಸಂಚಾರಕ್ಕೆ ಅವಕಾಶ ನೀಡಲು ಮತ್ತು ಇದಕ್ಕಾಗಿ ಗೇಟ್ ಅಳವಡಿಸಲು ಸಾಧ್ಯವಿಲ್ಲ’’ ಎಂದು ಹೇಳುತ್ತಿದ್ದಾರೆ.
ಸ್ಥಳಕ್ಕೆ ಪುದು ಗ್ರಾಪಂ ಅದ್ಯಕ್ಷ ರಮ್ಲಾನ್, ಕಲ್ಲತ್ತಡಮೆ ಸುಂದರ ಶೆಟ್ಟಿ, ಅರಫಾ ಮಸೀದಿಯ ಅದ್ಯಕ್ಷ ಬುಖಾರಿ, ಮುಖಂಡರಾದ ಸಲೀಮ್ ಕುಂಪನಮಜಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಇಕ್ಬಾಲ್ ದರ್ಬಾರ್, ಸದಸ್ಯ ರಿಯಾಝ್ ಭೇಟಿ ನೀಡಿದ್ದಾರೆ.