ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷರಾಗಿ ಉಮರ್ ಯು.ಎಚ್. ಪುನರಾಯ್ಕೆ
ಮಂಗಳೂರು, ಎ.24: ’ಸೃಜನಶೀಲ ಬರವಣಿಗೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮ’ ಎಂಬ ಘೋಷಣೆಯೊಂದಿಗೆ 1985ರಲ್ಲಿ ಸ್ಥಾಪನೆಗೊಂಡು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿರುವ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಉಮರ್ ಯು. ಎಚ್. ಪುನರಾಯ್ಕೆಯಾಗಿದ್ದಾರೆ.
ಕಳೆದ ಅವಧಿಗೆ ಅಧ್ಯಕ್ಷರಾಗಿದ್ದ ಇವರು ಸುಮಾರು 13 ವರ್ಷಗಳ ಕಾಲ ಮುಸ್ಲಿಮ್ ಲೇಖಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಕರಿಯರ್ ಕೌನ್ಸಿಲರ್ ಮತ್ತು ಅಂಕಣಕಾರರಾಗಿ ಗುರುತಿಸಿಕೊಂಡಿರುವ ಉಮರ್ ಯು. ಎಚ್., ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಹಾಗೂ ತುಳುನಾಡು ಪಬ್ಲಿಕೇಶನ್ಸ್ನ ಸ್ಥಾಪಕಾಧ್ಯಕ್ಷರು. ದಿ ಕ್ಯಾಂಪಸ್ ಕೆರಿಯರ್ ಅಕಾಡಮಿಯ ಆಡಳಿತ ನಿರ್ದೇಶಕರಾಗಿದ್ದು ಹಲವು ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ ವಫಾ ಚಾರಿಟೆಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ, ಫೋರಂ ಫಾರ್ ರೈಟ್ಸ್ ಎಂಡ್ ಜಸ್ಟಿಸ್ನ ಸಂಚಾಲಕ, ಹಿದಾಯ ಫೌಂಡೇಶನ್ನ ಸ್ಥಾಪಕ ಸದಸ್ಯ. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಕಿಡ್ನಿ ರೋಗಿಗಳ ಸಂಘದ ಗೌರವ ಸಂಚಾಲಕರಾಗಿ ಸೇವೆಯಲ್ಲಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಂಘದ ಮಹಾಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಅಲಿಕುಂಞಿ ಪಾರೆ ಉಪಾಧ್ಯಕ್ಷರಾಗಿ, ಬಿ.ಎ.ಮುಹಮ್ಮದಲಿ ಪ್ರಧಾನ ಕಾರ್ಯದರ್ಶಿಯಾಗಿ, ಎ.ಕೆ. ಕುಕ್ಕಿಲ ಜೊತೆ ಕಾರ್ಯದರ್ಶಿಯಾಗಿ, ಮುತ್ತಲಿಬ್ ಎಸ್. ಎಂ. ಕೋಶಾಧಿಕಾರಿಯಾಗಿ ಹಾಗೂ ಎ. ಸಈದ್ ಇಸ್ಮಾಯೀಲ್, ಸಲೀಂ ಬೋಳಂಗಡಿ, ಮುಹಮ್ಮದ್ ಮುಹ್ಸಿನ್, ಶೌಕತ್ ಅಲಿ, ಹುಸೈನ್ ಕಾಟಿಪಳ್ಳ ಮತ್ತು ಇರ್ಶಾದ್ ವೇಣೂರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.