ಎ.27: ಆಸ್ಟ್ರೋ ಮೋಹನ್ರ ಪೇಜಾವರ ಶ್ರೀ ಕುರಿತ ಚಿತ್ರಸಂಪುಟ ಬಿಡುಗಡೆ
ಉಡುಪಿ, ಎ.24: ‘ಎ ಡೇ ವಿದ್ ದ ಸೈಂಟ್ ದೆನ್ ಆ್ಯಂಡ್ ನೌ’ ಎಂಬ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಕುರಿತ ಅಪರೂಪದ ಚಿತ್ರ ಗಳನ್ನು ಒಳಗೊಂಡ ಕಾಫೀ ಟೇಬಲ್ ಪುಸ್ತಕವೊಂದು ಎ. 27ರಂದು ರಾಜಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ನಾಡಿನ ಖ್ಯಾತನಾಮ ಛಾಯಾಗ್ರಾಹಕ-ಪತ್ರಕರ್ತ ಆಸ್ಟ್ರೋ ಮೋಹನ್ ಅವರು ತೆಗೆದ 118 ಅಪರೂಪದ ಚಿತ್ರಗಳನ್ನು ಈ ಪುಸ್ತಕ ಒಳ ಗೊಂಡಿದೆ ಎಂದು ಆಸ್ಟ್ರೋ ಮೋಹನ್ ಅವರು ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೇಜಾವರ ಶ್ರೀಗಳ ನಾಲ್ಕು ಮತ್ತು ಐದನೇ ಪರ್ಯಾಯಗಳ ತಲಾ ಒಂದು ದಿನದ ಚಟುವಟಿಕೆಗಳ ಅಪರೂಪ ಕಲಾತ್ಮಕ ಚಿತ್ರದ ಮೂಲಕ ವಿವರಿಸುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ ಎಂದು ಆಸ್ಟ್ರೋ ಮೋಹನ್ ವಿವರಿಸಿದರು.
ಚಿತ್ರ ಸಂಪುಟ 108 ಪುಟಗಳನ್ನು ಹೊಂದಿದ್ದು, ನಾಲ್ಕು ಅಧ್ಯಾಯಗಳಲ್ಲಿ 118 ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಓರ್ವ ಸಂತನ ಚಟುವಟಿಕೆ ಗಳನ್ನು ಹದಿನಾರು ವರ್ಷಗಳ ಅಂತರದಲ್ಲಿ ಕಲಾತ್ಮಕವಾಗಿ ಸೆರೆ ಹಿಡಿದು ಚಿತ್ರ ಸಂಪುಟ ದಲ್ಲಿ ಬಳಸಿಕೊಳ್ಳಲಾಗಿದೆ. ಇದೊಂದು ಸಂಗ್ರಹ ಯೋಗ್ಯ ಚಿತ್ರ ಕೃತಿಯಾಗಲಿದೆ ಎಂದವರು ನುಡಿದರು.
ಭೂತರಾಜ ಪ್ರಕಾಶನದಲ್ಲಿ ಪ್ರಕಟಗೊಳ್ಳುವ ಈ ಕೃತಿಯ ಪ್ರಕಾಶಕರು ಪ್ರವೀಣಾ ಮೋಹನ್. ಕೃತಿ ಎ.27ರಂದು ಸಂಜೆ 4ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅನಾವರಣಗೊಳ್ಳಲಿದೆ. ಕರ್ನಾಟಕ ಸಂಸ್ಕೃತ ವಿವಿಯ ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಚಿತ್ರ ಸಂಪುಟ ಅನಾವರಣ ಮಾಡಲಿದ್ದಾರೆ. ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಚಿತ್ರಸಂಪುಟದ ಕೇಂದ್ರಬಿಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ.
ಹಿರಿಯ ಪತ್ರಕರ್ತೆ ಸಂಧ್ಯಾ ಎಸ್.ಪೈ, ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್, ಮೂಡುಬಿದಿರೆ ಆಳ್ವಾಸ್ ಎಜ್ಯುಕೇಶನ್ ಟಸ್ಟ್ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮಣಿಪಾಲ ಮೀಡಿಯಾ ನೆಟ್ವರ್ಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ಕುಮಾರ್ ಉಪಸ್ಥಿತರಿರುವರು ಎಂದೂ ಅವರು ತಿಳಿಸಿದ್ದಾರೆ.
ಯತಿಗಳ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮುಖಗಳನ್ನು ಕಲಾತ್ಮಕ ಚಿತ್ರಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಮೂಡಿಗೆರೆ ಸಮೀಪದ ನಕ್ಸಲ್ ಪೀಡಿತ ಮುಂಡಗಾರು ಗ್ರಾಮಕ್ಕೆ ಪೇಜಾವರ ಮಠದಿಂದ ವತಿಯಿಂದ ವ್ಯವಸ್ಥೆಗೊಳಿಸಲಾದ ವಿದ್ಯುತ್ ಸಂಪರ್ಕದ ಉದ್ಘಾಟನೆ ಹಾಗೂ ಅಲ್ಲಿ ಅಂದು ನಡೆದ ಪೇಜಾವರಶ್ರೀಗಳ ವಿವಿಧ ಚಟುವಟಿಕೆಗಳನ್ನು ವಿಶೇಷ ಚಿತ್ರಗಳ ಮೂಲಕ ಪ್ರಸ್ತುತಪಡಿಸಲಾಗಿದೆ.
ಪೇಜಾವರಶ್ರೀಗಳು ಆಶ್ರಮ ಸ್ವೀಕರಿಸಿ 80 ವರ್ಷಗಳಾದ ಸಂದರ್ಭದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಚಿತ್ರಗಳು ಹಾಗೂ ಪೇಜಾವರ ಶ್ರೀಗಳ ಅಪರೂಪದ ಚಿತ್ರಗಳನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ ಎಂದವರು ಮಾಹಿತಿ ನೀಡಿದರು. ಪ್ರಕಾಶಕಿ ಪ್ರವೀಣಾ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.