ತೊಕ್ಕೊಟ್ಟು: ಸಮಾನ ಮನಸ್ಕರಿಂದ ಸಂತಾಪ ಸಭೆ
ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ
ಉಳ್ಳಾಲ, ಎ. 24: ಈಸ್ಟರ್ ಹಬ್ಬದಂದು ಶುಭ್ರ ಮನಸ್ಸಿನಲ್ಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದ ಅಮಾಯಕರನ್ನು ಕೊಲ್ಲುವ ಮೂಲಕ ಉಗ್ರರು ತಂದೆಗೆ ಮಕ್ಕಳು, ಮಕ್ಕಳಿಗೆ ತಂದೆ ಇಲ್ಲದಂತೆ ಮಾಡಿರುವುದು ಪೈಶಾಚಿಕ ಕೃತ್ಯವಾಗಿದೆ. ಇಂತಹ ದುಷ್ಕೃತ್ಯವನ್ನು ಮನುಷ್ಯ ಎನಿಸಿಕೊಂಡವರು ಕ್ಷಮಿಸಲೂ ಅಸಾಧ್ಯ ಎಂದು ಉಳ್ಳಾಲ ನಗರಸಭಾ ಸದಸ್ಯ ಮುಹಮ್ಮದ್ ಮುಕಚ್ಚೇರಿ ಹೇಳಿದರು.
ನ್ಯೂಝಿಲೆಂಡ್ ಮತ್ತು ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಉಳ್ಳಾಲ ನಗರಸಭಾ ವ್ಯಾಪ್ತಿಯ ಜನಪ್ರತಿಧಿಗಳು ಮತ್ತು ಸಮಾನ ಮನಸ್ಕರ ವತಿಯಿಂದ ಬುಧವಾರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.
ನಗರಸಭಾ ಸದಸ್ಯ ಅಯ್ಯೂಬ್ ಮಂಚಿಲ ಮಾತನಾಡಿ ಕೆಲವು ತಿಂಗಳ ಹಿಂದೆ ನ್ಯೂಜಿಲ್ಯಾಂಡ್ ಮಸೀದಿಯಲ್ಲಿ ಉಗ್ರದಾಳಿ ನಡೆದಿದ್ದರೆ ಇದೀಗ ಶ್ರೀಲಂಕಾ ಚರ್ಚ್ ಮತ್ತು ಮಾಲ್ಗಳಲ್ಲಿ ಉಗ್ರರು ದುಷ್ಕೃತ್ಯ ಎಸಗಿದ್ದಾರೆ. ಇದು ಮಾನವೀಯತೆಗೆ ಕಳಂಕವಾಗಿದೆ. ಉಗ್ರರಿಗೆ ಜಾತಿ, ಧರ್ಮ ಎಂಬುದಿಲ್ಲ. ಯಾರೇ ಆದರೂ ಇಂತಹ ದುಷ್ಕೃತ್ಯದಲ್ಲಿ ಭಾಗಿಯಾದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ, ಶಶಿಕಲಾ, ವೀಣಾ ಡಿಸೋಜ, ಯು.ಎ. ಇಸ್ಮಾಯೀಲ್, ರವಿಚಂದ್ರ ಗಟ್ಟಿ, ಇಬ್ರಾಹೀಂ ಅಶ್ರಫ್ ಅಝಾದ್ ನಗರ, ಮಾಜಿ ಸದಸ್ಯರಾದ ಹುಸೈನ್ ಕುಂಞಿಮೋನು, ದಿನೇಶ್ ರೈ, ಪ್ರಮುಖರಾದ ಮನ್ಸೂರ್ ಮಂಚಿಲ, ಸೋಶಿಯಲ್ ಫಾರೂಕ್, ಜಾಫರ್ ಅಲೇಕಳ, ಗೋಪಾಲ ತಚ್ಚಾಣಿ, ಅಲ್ತಾಫ್ ಅಲೇಕಳ, ಶುಕೂರು ಅಕ್ಕರೆಕೆರೆ,ಜಾನ್ ಡಿಸೋಜ, ಜಾನೆಟ್ ಡಿಸೋಜ, ಅರುಣ್ ಡಿಸೋಜ, ಹೆರಾಲ್ಡ್ ಡಿಸೋಜ, ಟಿವಿನಾ ಡಿಸೋಜ, ಡೋಲ್ಫಿ ಡಿಸೋಜ, ಆಸಿಫ್ ಮಾರ್ಗತಲೆ, ಜಗತ್ ಮತ್ತಿತರರು ಉಪಸ್ಥಿತರಿದ್ದರು.