ಶ್ರೀಲಂಕಾ ಸ್ಫೋಟ ಹಿನ್ನೆಲೆ: ಪೊಲೀಸ್ ಆಯುಕ್ತಾಲಯದಲ್ಲಿ ವಿಶೇಷ ಸಭೆ
ಮುನ್ನೆಚ್ಚರಿಕೆ ವಹಿಸಲು ಸೂಚನೆ
ಮಂಗಳೂರು, ಎ. 25: ಶ್ರೀಲಂಕಾದಲ್ಲಿ ಕಳೆದ ರವಿವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗುರುವಾರ ನಗರದ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅಧ್ಯಕ್ಷತೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳು, ಉದ್ಯಮ ಸಂಸ್ಥೆಗಳು ಮತ್ತು ಮಾಲ್ಗಳಲ್ಲಿ ಹಾಗೂ ಜನಸಂದಣಿ ಇರುವ ತಾಣಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಶೇಷ ಸಭೆ ನಡೆಯಿತು.
ನಗರ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳು, ಉದ್ಯಮ ಸಂಸ್ಥೆಗಳಾದ ಒಎನ್ಜಿಸಿ ಎಂಆರ್ಪಿಎಲ್, ನವಮಂಗಳೂರು ಬಂದರು, ವಿಮಾನ ನಿಲ್ದಾಣ, ಮಾಲ್ಗಳು ಮತ್ತಿತರ ಸಂಸ್ಥೆಗಳ ಆಡಳಿತಾಧಿಕಾರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ದೇವಸ್ಥಾನ, ಮಸೀದಿ, ಚರ್ಚ್ಗಳ ಆವರಣ ಗೋಡೆಯನ್ನು ಭದ್ರ ಪಡಿಸುವುದು, ದ್ವಾರ ಅಥವಾ ಗೇಟ್ಗಳನ್ನು ಬಲಪಡಿಸುವುದು, ಸಿಸಿ ಕ್ಯಾಮರಾ ಮತ್ತು ಲೋಹ ಶೋಧಕ ಅಳವಡಿಸುವುದು, ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪೊಲೀಸ್ ಆಯುಕ್ತರು ಸಲಹೆಗಳನ್ನು ನೀಡಿದರು.
ಕೆಲವು ಮಾಲ್ಗಳಲ್ಲಿ ಲೋಹ ಶೋಧಕ ಉಪಕರಣವನ್ನು ಅಳವಡಿಸಿದ್ದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು ಮುಂದೆ ಹಾಗಾಗಬಾರದು. ಅಪರಿಚಿತರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅವರ ಬಗ್ಗೆ ಹೆಚ್ಚು ನಿಗಾ ವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ ಕಮಿಷನರ್ ಅಗತ್ಯ ಬಿದ್ದರೆ ಪೊಲೀಸರು ಯಾವುದೇ ಸಮಯದಲ್ಲೂ ನೆರವು ನೀಡಲು ಬದ್ಧರಾಗಿದ್ದಾರೆ ಎಂದರು.
ಭದ್ರತಾ ಸಿಬ್ಬಂದಿಯನ್ನು (ಸೆಕ್ಯುರಿಟಿ ಗಾರ್ಡ್) ನೇಮಿಸುವ ಮುನ್ನ ಅವರ ಪೂರ್ವಾಪರ ಬಗ್ಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆದಿಬೇಕು ಎಂದ ಕಮಿಷನರ್ ಮಾಲ್ಗಳಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿ ಯಾವ ರೀತಿ ತಪಾಸಣೆ ನಡೆಸಬೇಕು ಎಂಬ ಬಗ್ಗೆ ಶೀಘ್ರವೇ ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು. ಖಾಸಗಿ ಭದ್ರತಾ ಸಿಬ್ಬಂದಿಯ ಕ್ರಿಮಿನಲ್ ಹಿನ್ನೆಲೆಯನ್ನು ಕಡ್ಡಾಯವಾಗಿ ಪೊಲೀಸ್ ಇಲಾಖೆಯಲ್ಲಿ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.