2018-19ರಲ್ಲಿ ಕಳವಾದ 3.72 ಕೋಟಿ ರೂ. ಮೌಲ್ಯದ ಸೊತ್ತುಗಳ ಜಪ್ತಿ: ಕಮಿಷನರ್ ಸಂದೀಪ್ ಪಾಟೀಲ್
ಮಂಗಳೂರು ಪೊಲೀಸ್ ವ್ಯಾಪ್ತಿ
ಮಂಗಳೂರು, ಎ. 26: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಕಳವಾದ ಪ್ರಕರಣಗಳಲ್ಲಿ ಒಟ್ಟು 3.72 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಕಳವಾದ ಸೊತ್ತುಗಳ ಮರುಕಳಿಸುವ ಕವಾಯತು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಾರಿಸುದಾರ ರಿಗೆ ಸೊತ್ತುಗಳನ್ನು ಮರಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2018ನೇ ಸಾಲಿನಲ್ಲಿ ಒಟ್ಟು 4.30 ಕೋಟಿ ರೂ. ಮೌಲ್ಯದ ಸೊತ್ತು ಕಳವಾಗಿದ್ದು 3.40ಕೋಟಿ ಮೌಲ್ಯ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ. 2019ನೇ ಸಾಲಿನಲ್ಲಿ ಒಟ್ಟು 65 ಲಕ್ಷ ರೂ. ಮೌಲ್ಯದ ಸೊತ್ತು ಕಳವಾಗಿದ್ದು, 32ಲಕ್ಷ ರೂ. ಮೌಲ್ಯದ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳು, ಕಳವು ಪ್ರಕರಣಗಳನ್ನು ಸಮರ್ಪಕವಾಗಿ ತನಿಖೆ ನಡೆಸಿ, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಎಲ್ಲ ಅಧಿಕಾರಿ, ಸಿಬ್ಬಂದಿಗಳನ್ನು ಅವರು ಈ ಸಂದರ್ಭ ಅಭಿನಂದಿಸಿದರು.
ಮಂಗಳೂರು ಸೆಂಟ್ರಲ್ ಉಪವಿಭಾಗದಿಂದ 39,17,900ರೂ., ಮಂಗಳೂರು ದಕ್ಷಿಣ ಉಪವಿಭಾಗದಿಂದ 36,60,410ರೂ., ಮಂಗಳೂರು ಉತ್ತರ ವಿಭಾಗದಿಂದ 2477180 ರೂ. ಮೌಲ್ಯ ಸೊತ್ತು ವಶಪಡಿಸಿಕೊಳ್ಳಲಾಗಿದ್ದು ಇದರಲ್ಲಿ ನಗದು, ಚಿನ್ನಾಭರಣ, ನಾನಾ ಮಾದರಿ ಬೈಕ್ಗಳು, ಮೊಬೈಲ್, ಕ್ಯಾಮೆರಾ ಸೇರಿವೆ. ಈ ಯಶಸ್ಸಿನಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಕೆಲವು ಸಮಯ ಹಿಂದೆ ವರ್ಗಾವಣೆಯಾದ ಅಕಾರಿಗಳ, ಸಿಬ್ಬಂದಿ ಕೊಡುಗೆ ಇದೆ ಎಂದರು.
ಕಳವು ಸೇರಿದಂತೆ ಯಾವುದೇ ಪ್ರಕರಣ ನಡೆದ ಬಳಿಕ ತನಿಖೆ ಮಾಡಿ ವಶಪಡಿಸಿಕೊಂಡ ಸೊತ್ತುಗಳನ್ನು ಕೋರ್ಟ್ ಮುಖೇನ ವಾರಿಸುದಾರರಿಗೆ ಮರಳಿ ಕೊಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸರು ಇಲಾಖೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿ ಕೆಲಸ ಮಾಡುತ್ತಿದ್ದು, ಇದು ಇಲಾಖೆ ಬಗ್ಗೆ ಜನರಲ್ಲಿರುವ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಬಳಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ದೂರು, ಸಲಹೆಗಳಿದ್ದಲ್ಲಿ ಫೇಸ್ ಬುಕ್, ವಾಟ್ಸ್ಆ್ಯಪ್, ಟ್ವಿಟರ್ ಮೂಲಕ ನೀಡಿದರೆ ಹೆಚ್ಚು ಅನುಕೂಲ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿ ಮಾಡುವಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಡ್ರಗ್ಸ್ ಮೂಲ ಶೋಧ
ನಗರದ ಯುವಜನತೆ ಡ್ರಗ್ಸ್, ಗಾಂಜಾ, ಎಂಡಿಎಂ, ಸಿಂಥೆಟಿಕ್ ಮಾದಕಕ್ಕೆ ಬಲಿಯಾಗುತ್ತಿದ್ದು, ಈ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಈ ಮಾದಕ ಎಲ್ಲಿಂದ ಸಾಗಾಟವಾಗುತ್ತಿದೆ ಎಂಬ ಮೂಲವನ್ನು ಪತ್ತೆ ಹಚ್ಚಿ ಸಂಪೂರ್ಣ ಮಟ್ಟ ಹಾಕುವತ್ತ ಪ್ರಯತ್ನಿಸಲಾಗುವುದು ಎಂದರು.
ಶ್ರೀಲಂಕಾ ಬಾಂಬು ದಾಳಿಯ ಹಿನ್ನೆಲೆಯಲ್ಲಿ ನಗರದಲ್ಲಿ ವಿಶೇಷ ನಿಗಾವಿಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಾಡ್ಜ್ ಹೊಟೇಲ್ ತಪಾಸಣೆ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ತಪಾಸಣೆ ನಡೆಯುತ್ತಿದೆ. ದಿನದ 24 ಗಂಟೆಯೂ ಪೊಲೀಸ್ ಬೀಟ್ ನಡೆಸಲಾಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗ ಡಿಸಿಪಿ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಲಕ್ಷ್ಮೀ ಗಣೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹರೀಶ್ ನಿರೂಪಿಸಿದರು.