ಮರಳುಗಾರಿಕೆಗೆ ಅವಕಾಶ ನೀಡಲು ಸಂಸದೆ ಶೋಭಾ ಒತ್ತಾಯ
ಉಡುಪಿ, ಎ.26: ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದೇ ಇರುವುದರಿಂದ ಕಳೆದ ಕೆಲವು ತಿಂಗಳುಗಳಿಂದ ಉಡುಪಿ ಜಿಲ್ಲೆಯ ಜನ ಸಾಮಾನ್ಯರೂ ತೀವ್ರತರ ತೊಂದರೆ ಅನುಭವಿಸುತಿದ್ದಾರೆ. ಮರಳುಗಾರಿಕೆಗೆ ಅವಕಾಶ ನೀಡದೇ ಇರುವುದರಿಂದ ಅದೆಷ್ಟೋ ಜನರ ಉದ್ಯೋಗವೇ ನಿಂತಂತಾಗಿದೆ.
ಮರಳುಗಾರಿಕೆಯಿಂದಲೇ ಜೀವನ ಸಾಗಿಸುತಿದ್ದ ಎಷ್ಟೊ ಕುಟುಂಬಗಳು ಪರದಾಡುವಂತಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ನೇತೃತ್ವದ ಜನಪ್ರತಿನಿಧಿಗಳು ಇಂದು ಜಿಲ್ಲಾದಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಮಾಹಿತಿಗಳನ್ನು ನೀಡಿದರು.
ಆದುದರಿಂದ ಜಿಲ್ಲೆಯಲ್ಲಿ ಆದಷ್ಟು ಬೇಗ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕೆ.ರಘುಪತಿ ಭಟ್ ಅವರಿದ್ದ ನಿಯೋಗ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿತು.
ಮರಳು ಹೋರಾಟ ಸಮಿತಿಯ ಸದಸ್ಯರು, ಮರಳು ಕಾರ್ಮಿಕ ಸಂಘಟನೆ ಯ ಸದಸ್ಯರ ಜೊತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ, ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಮರಳುಗಾರಿಕೆಗೆ ಅವಕಾಶ ನೀಡಿರಲಿಲ್ಲ. ಆದರೆ ಸದ್ಯ ಚುನಾವಣೆ ಮುಗಿದಿದ್ದು ರಾಜ್ಯ ಸರಕಾರದ ಆದೇಶದ ಪ್ರಕಾರವೇ ಮರಳುಗಾರಿಕೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ಟೆಂಡರ್ ಕರೆಯುವ ವಿಚಾರವಾಗಿ ರಾಜ್ಯ ಸರಕಾರದ ನಿಯಮ ದ ಪ್ರಕಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇರುವ ‘7 ಸದಸ್ಯರ ಸಮಿತಿ’ಯ ಸಭೆಯನ್ನು ಕರೆದು ಕೂಡಲೇ 170 ಜನರಿಗೆ ಸಿಆರ್ಝಡ್ ವ್ಯಾಪ್ತಿಯಲ್ಲಿ 7.80 ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆಗೆಯಲು ಅವಕಾಶ ಮಾಡಿ ಕೊಡಬೇಕು. ಕೆಎಸ್ಸಿಝಡ್ಎಂನಿಂದ ಮಂಜೂರಾಗಿ ಬಂದಂತಹ ಮರಳು ಜನರಿಗೆ ಸಿಗುವಂತೆ ಮಾಡಬೇಕು ಎಂದು ಹೇಳಿದರು.
ಪಕ್ಕದ ಮಂಗಳೂರು ಮತ್ತು ಉತ್ತರ ಕನ್ನಡದಲ್ಲಿ ಮರಳುಗಾರಿಕೆಗೆ ಅವಕಾಶ ಇದೆ. ಆದರೆ ಉಡುಪಿಯಲ್ಲಿ ಮಾತ್ರ ಇಂತಹ ಸಮಸ್ಯೆ ಇದೆ ಎಂದು ಮನವ ರಿಕೆ ಮಾಡಿದ ಶಾಸಕರು, ಕೂಡಲೇ ಸರಕಾರದ ಅನುಮತಿ ಪಡೆದು ಜಿಲ್ಲಾಧಿಕಾರಿ ಗಳು ಮರಳುಗಾರಿಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.