ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ: ದ.ಕ.ಜಿಲ್ಲೆಯ ಮಸೀದಿಗಳಲ್ಲಿ ಖಂಡನೆ
ಮಂಗಳೂರು, ಎ.26: ಕಳೆದ ರವಿವಾರ ಶ್ರೀಲಂಕಾದ ಚರ್ಚ್ ಮತ್ತು ಹೊಟೇಲುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನಲೆಯಲ್ಲಿ ಅವಿಭಜಿತ ದ.ಕ.ಜಿಲ್ಲೆಯ ಹಲವು ಮಸೀದಿಗಳಲ್ಲಿ ಶುಕ್ರವಾರ ಜುಮಾ ವೇಳೆ ಇಮಾಮರುಗಳು ಖಂಡನಾ ಭಾಷಣ ಮಾಡಿದರು.
ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಎಂಬಲ್ಲಿ ಹೊಸ ಮಸೀದಿಯನ್ನು ಉದ್ಘಾಟಿಸಿ ಜುಮಾ ಖುತುಬಾ ಮಾಡಿದ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ‘ಶ್ರೀಲಂಕಾದಲ್ಲಿ ಘಟಿಸಿದ ಸರಣಿ ಬಾಂಬ್ ಸ್ಫೋಟವು ಖಂಡನೀಯ. ಮಾನವ ಸಮಾಜ ತಲೆತಗ್ಗಿಸುವಂತಹ ದುಷ್ಕೃತ್ಯ ಇದಾಗಿದೆ. ಬಾಂಬ್ ದಾಳಿಕೋರರಿಗೆ ಜಾತಿ, ಮತವಿಲ್ಲ. ಈ ಭೀಕರ ವಾದವನ್ನು ಜಗತ್ತಿನಿಂದ ನಿರ್ಮೂಲನೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಿದೆ’ ಎಂದರು.
ಉಡುಪಿಯ ನಾಯರ್ಕೆರೆ ಹಾಶಿಮಿ ಮಸ್ಜಿದ್ನಲ್ಲಿ ಡಾ. ಮೊಹಿಯ್ಯುದ್ದೀನ್ ಗಝಿ ಮತ್ತು ಕೃಷ್ಣಾಪುರ-ಚೊಕ್ಕಬೆಟ್ಟು ಜುಮಾ ಮಸ್ಜಿದ್ನ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಕೃತ್ಯವನ್ನು ಖಂಡಿಸಿ ಮಾತನಾಡಿದರು. ಉಳಿದಂತೆ ಎರಡೂ ಜಿಲ್ಲೆಯ ನಗರ ಮತ್ತು ಗ್ರಾಮಾಂತರದ ಕೆಲವು ಮಸೀದಿಗಳಲ್ಲಿ ಕೃತ್ಯವನ್ನು ಖಂಡಿಸಿ ಭಾಷಣಗೈದ ಬಗ್ಗೆ ತಿಳಿದು ಬಂದಿದೆ.