ಮೇ 2ಕ್ಕೆ ವಿದ್ಯಾಪೋಷಕ್ನ ವಿದ್ಯಾರ್ಥಿಗಳಿಗೆ ಮನೆ ಹಸ್ತಾಂತರ
ಉಡುಪಿ, ಎ.26: ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್, ಕಳೆದ 14 ವರ್ಷಗಳಿಂದ ಉಡುಪಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ವಿಶೇಷ ರೀತಿಯ ನೆರವು ನೀಡುತ್ತಾ ಬಂದಿದ್ದು, ತೀರಾ ಅಗತ್ಯವುಳ್ಳ 11 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಕಲಾವಿದರಿಗೆ ಮನೆ ನಿರ್ಮಿಸಿಕೊಟ್ಟಿದೆ.
ಈ ವರ್ಷ ವಿದ್ಯಾ ಪೋಷಕ್ ಮೂಲಕ ಬಡ ಹಾಗೂ ತೀರಾ ಹಿಂದುಳಿದ ಐದು 5 ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ಮೂರು ಮನೆಗಳನ್ನು ಮುಂಬೈಯ ಉದ್ಯಮಿ ಕುತ್ಪಾಡಿ ರಾಮಚಂದ್ರ ಗಾಣಿಗರು 12 ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಇವುಗಳ ಉದ್ಘಾಟನೆ ಮೇ 2ರಂದು ನಡೆಯಲಿದೆ.
ಮೇ 2ರ ಗುರುವಾರ ಅಪರಾಹ್ನ 3 ಗಂಟೆಗೆ ಕುತ್ಪಾಡಿಯ ಸಂಪಿಗೆ ನಗರದಲ್ಲಿರುವ ಸೃಜಾ, ಸಂಜೆ 5 ಗಂಟೆಗೆ ಬೈಂದೂರಿನ ಎಳಜಿತ್ನಲ್ಲಿರುವ ಪ್ರಜ್ವಲ್ ಹಾಗೂ 6 ಗಂಟೆಗೆ ಬಿಜೂರಿನಲ್ಲಿರುವ ವಿನೋದ ಇವರಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು. ಈ ಮೂವರು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು.
ಸಂಸ್ಥೆಯ ಉಪಾಧ್ಯಕ್ಷ ಎಂ. ಗಂಗಾಧರ್ ರಾವ್ ಇವರ ನೇತೃತ್ವದಲ್ಲಿ ಮನೆ ನಿರ್ಮಾಣಗೊಂಡಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.