ನಿವೃತ್ತ ಪೊಲೀಸ್ ಹೆಡ್ಕಾನ್ಸ್ಟೆಬಲ್ ಕೆ. ಅಬ್ದುಲ್ ಹಮೀದ್ ನಿಧನ
ಬಂಟ್ವಾಳ, ಎ. 26: "ಪೊಲೀಸ್ ಹಮೀದಾಕ" ಎಂದೇ ಚಿರಪರಿಚಿತರಾಗಿದ್ದ, ನಿವೃತ್ತ ಪೊಲೀಸ್ ಹೆಡ್ಕಾನ್ಸ್ಟೆಬಲ್ ಕೆ. ಅಬ್ದುಲ್ ಹಮೀದ್ (75) ಅವರು ವಯೋಸಹಜ ಅನಾರೋಗ್ಯದಿಂದ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನೆಹರೂ ನಗರದಲ್ಲಿರುವ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಐವರು ಪುತ್ರಿಯರ ಸಹಿತ ಅಪಾಯ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಮೃತದೇಹವನ್ನು ನೆಹರೂ ನಗರದ ಮನೆಯಲ್ಲಿ ಇರಿಸಲಾಗಿದ್ದು, ಎ.27ರಂದು ಬೆಳಿಗ್ಗೆ ದಫನ ಕಾರ್ಯ ಮಾಡಲಾಗವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
"ಪೊಲೀಸ್ ಹಮೀದಾಕ" ಎಂದೇ ಚಿರಪರಿಚಿತ:
ಸುಮಾರು 20 ವರ್ಷಗಳ ಕಾಲ ಮಂಗಳೂರಿನ ಡಿಎಆರ್ ವಿಭಾಗದಲ್ಲಿ ಪೊಲೀಸ್ ಹೆಡ್ಕಾನ್ಸ್ಟೆಬಲ್ ಆಗಿ ಹಾಗೂ ವಾಹನ ಚಾಲಕರಾಗಿ ಸೇವೆ ಸಲ್ಲಿರುವ ಹಮೀದ್ ಅವರು, "ಪೊಲೀಸ್ ಹಮೀದಾಕ" ಎಂದೇ ಚಿರಪರಿಚಿತರಾಗಿದ್ದರು. ಈ ಮೊದಲು ಮಂಗಳೂರಿನಲ್ಲಿ ಸೇವೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳಾದ ಎ.ಪಿ.ದೊರೆ, ಸಿಯಲ್ ಸಿಂಗ್, ಭಾಸ್ಕರ್ ಹಾಗೂ ಇನ್ನಿತರ ಉನ್ನತ ಪೊಲೀಸ್ ಅಧಿಕಾರಿಗಳಿಗೆ ವಾಹನ ಸಾರಥಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪೊಲೀಸ್ ಸೇವೆಯಲ್ಲಿ ಶಿಸ್ತುಬದ್ಧ, ಪ್ರಮಾಣಿಕ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಹಮೀದಾಕ ಅವರು, ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಆತ್ಮೀಯರಾಗಿದ್ದರಲ್ಲದೆ, ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು.
ಮಂಗಳೂರಿನಲ್ಲಿ ಸೇವೆ ಸಲ್ಲಿಸಿ, ಬಳಿಕ ಡಿಜಿಪಿಯಾಗಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ಸಿಯಲ್ ಸಿಂಗ್ ಅವರು, ಕೆಲ ವರ್ಷಗಳ ಬಳಿಕ ಮಂಗಳೂರು ಬಂದ ಸಂದರ್ಭದಲ್ಲಿ ಹಮೀದ್ ಅವರನ್ನು ಕರೆಸಿ ಭೇಟಿ ಮಾಡಿರುವುದು ವಿಶೇಷ.
ಹಮೀದ್ ಅವರ ಕುಟುಂಬವು ಈ ಹಿಂದೆ ಹಲವು ವರ್ಷಗಳ ಕಾಲ ಬುಡೋಳಿಯಲ್ಲಿ ನೆಲೆಸಿದ್ದು, ಇದೀಗ ಪಾಣೆಮಂಗಳೂರಿನ ನೆಹರೂನಗರಕ್ಕೆ ಬಂದು ಇಂದಿಗೆ 10ವರ್ಷಗಳಾಗಿವೆ.
ಸೇವಾಕಾರ್ಯ:
ಕರ್ತವ್ಯದಿಂದ ನಿವೃತ್ತರಾದ ಬಳಿಕ ಮಂಗಳೂರಿನಲ್ಲಿ ಖಾಸಗಿ ವಾಹನ ಚಾಲಕರಾಗಿ ಕೆಲಸ ಮಾಡಿ ಬಳಿಕ ಮಂಗಳೂರಿನ ಬಿಬಿ ಮುಖಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಡಿಯಾರದ ಸಮೀಪದ ಕೆಮ್ಮಾನ್ ಕಜೆ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರಲ್ಲದೆ, ಬುಡೋಳಿ ಸಮೀಪದ ದೇನಾಜೆ ಎಂಬಲ್ಲಿ ಮದ್ರಸ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.