ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಂಘ ಸ್ಥಾಪನೆ: ಅಬ್ದುಲ್ ರಹಿಮಾನ್ ಯುನಿಕ್
ಪುತ್ತೂರು, ಎ.27: ಕೃಷಿ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕರಿಸುವ ಹಾಗೂ ಕಾರ್ಮಿಕರ ಸಂಘಟಿತ ಹೋರಾಟ ನಡೆಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೃಷಿ ಕಾರ್ಮಿಕರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆಯ ವತಿಯಿಂದ ಕೃಷಿ ಕಾರ್ಮಿಕರ ವೇತನ ಹೆಚ್ಚಳ, ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ಸೌಲಭ್ಯಗಳು, ಕೃಷಿಕರಿಗೆ ಪ್ರತ್ಯೇಕ ಬಜೆಟ್ ನಿರ್ಮಾಣಕ್ಕಾಗಿ ಒತ್ತಾಯಿಸಲಾಗುವುದು. ಕೃಷಿ ಕಾರ್ಯದ ವೇಳೆ ಉಂಟಾಗುವ ಅವಘಡಗಳು, ಕಾಡು ಪ್ರಾಣಿಗಳ ತೊಂದರೆ, ಬೆಳೆ ನಾಶಗಳಿಗೆ ಸೂಕ್ತ ಪರಿಹಾರ ನೀಡಲು, ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕೃಷಿ ಕಾರ್ಮಿಕರಿಗೂ ಸವಲತ್ತು ಸಿಗಲು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ದ.ಕ. ಜಿಲ್ಲೆಯಲ್ಲಿ ಇದೊಂದು ಪ್ರಥಮ ಕೃಷಿ ಕಾರ್ಮಿಕ ಸಂಘಟನೆಯಾಗಿದ್ದು, ಪುತ್ತೂರನ್ನು ಕೇಂದ್ರವಾಗಿರಿಸಿ ಜಿಲ್ಲಾದ್ಯಂತ ಕಾರ್ಯನಿರ್ವಹಿಸಲಿದೆ. ಈಗಾಗಲೇ ಸಂಘದ ನೋಂದಣಿ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ 1,500ಕ್ಕೂ ಅಧಿಕ ಮಂದಿಯನ್ನು ಸಂಘದ ಸದಸ್ಯರನ್ನಾಗಿ ನೋಂದಾಯಿಸಲಾಗಿದೆ. ಮೇ 1ರಂದು ಸಂಘದ ವತಿಯಿಂದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು. ಜೂನ್ ಅಥವಾ ಜುಲೈಯಲ್ಲಿ ಪುತ್ತೂರಿನಲ್ಲಿ ಕೃಷಿ ಕಾರ್ಮಿಕರ ಬ್ರಹತ್ ಸಮಾವೇಶ ಹಮ್ಮಿಕೊಳ್ಳಲಾವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಹಾವೀರ ಜೈನ್, ಉಪಾಧ್ಯಕ್ಷ ಐ.ಸಿ.ಕೈಲಾಸ್, ಸದಸ್ಯ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.