ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ
ಮಂಗಳೂರು, ಎ.27: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್ಎಪಿಸಿಸಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯವರ ಪ್ರಗತಿ ಪರಿಶೀಲನಾ ಸಭೆಯು ಶುಕ್ರವಾರ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕ (ಕುಷ್ಠ) ಡಾ.ಮುನಿರಾಜು ರಾಜ್ಯದಲ್ಲೇ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದಿರುವ ದ.ಕ.ಜಿಲ್ಲೆಯಲ್ಲಿ ಇತರ ಜಿಲ್ಲೆಗಿಂತ ಕುಷ್ಠರೋಗವನ್ನು ನಿರ್ಮೂಲನೆಗೆ ಹೆಚ್ಚು ಒತ್ತು ನೀಡಬೇಕು. ಪ್ರತಿ ತಿಂಗಳು 2-3 ಹೊಸ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವುದನ್ನು ಗಮನಿಸಿದಾಗ ಜಿಲ್ಲೆಯ ಸಮುದಾಯದಲ್ಲಿ ಇನ್ನೂ ಸೋಂಕಿನ ಮೂಲ ಇರುವುದನ್ನು ಸಂಕೇತಿಸುತ್ತದೆ ಎಂದರು.
ಕ್ಷೇತ್ರಮಟ್ಟದಲ್ಲೂ ಕೂಡ ಕುಷ್ಠರೋಗದ ಸಕ್ರಿಯ ಪತ್ತೆಗೆ ಇನ್ನೂ ಹೆಚ್ಚು ಗಮನಹರಿಸಬೇಕಾಗಿದೆ ಮತ್ತು ಹೆಚ್ಚಿನ ಅದ್ಯತೆ ಕೊಡಬೇಕಾಗಿದೆ. ಸಮಾಜದಲ್ಲಿ ಕುಷ್ಠರೋಗದ ಬಗ್ಗೆ ಸಾಮಾಜಿಕ ಕಳಂಕ ಇನ್ನೂ ಜೀವಂತವಾಗಿರುವ ಬಗ್ಗೆ ಹಾಗೂ ಸಾಮಾಜಿಕ ಕಳಂಕ ನಿವಾರಣೆ ಮಾಡುವ ಬಗ್ಗೆ ಒತ್ತು ನೀಡಿದ ಡಾ.ಮುನಿರಾಜು ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಲು ಕರೆ ನೀಡಿದರು.
ದ.ಕ. ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು.